Monday, February 16, 2009

ಶಾಸ್ತ್ರೀಯ ಸ್ಥಾನ ಅನಿಶ್ಚಿತ: ಸರ್ಕಾರದ ಮೀನಾಮೇಷ

ಇನ್ನೂ ಸಲ್ಲಿಕೆಯಾಗದ ಇಂಪ್ಲೀಡಿಂಗ್‌
ಸಂಭ್ರಮದ ಮಧ್ಯೆ ವಾಸ್ತವ ಮರೆತ ಸರ್ಕಾರ
ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆ

ಕನ್ನಡಕ್ಕೆ ಅಭಿಜಾತ ಸ್ಥಾನ(ಶಾಸ್ತ್ರೀಯ) ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ಆರ್‌ ಗಾಂಧಿ ರಿಟ್‌ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಉದಾಸೀನ ಧೋರಣೆ ತಾಳಿರುವುದರಿಂದ ಕನ್ನಡ ಶಾಸ್ತ್ರೀಯ ಭಾಷೆಯಾಗಿ ಉಳಿಯುವುದು ಅನಿಶ್ಚಿತವಾಗಿದೆ.
ಈ ಬಗ್ಗೆ ಸರ್ಕಾರದ ಪ್ರಮುಖ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರಕ್ರಿಯೆ ನಡೆದಿಲ್ಲದಿರುವುದನ್ನು ಸೂಚಿಸುತ್ತದೆ.
ಶಾಸ್ತ್ರೀಯ ಭಾಷೆ ಸ್ಥಾನ ಕೊಡಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದು ಹೀಗೆ: `ಕೇಂದ್ರ ಸರ್ಕಾರಕ್ಕಾಗಲಿ, ಶಿಫಾರಸ್ಸು ಸಮಿತಿಗಾಗಲಿ ಇದರಲ್ಲಿ ಆಸಕ್ತಿಯಿಲ್ಲ. ಅಷ್ಟಕ್ಕೂ ಅವರು ಯಾಕೆ ರಿಟ್‌ ಅರ್ಜಿ ಸಂಬಂಧ ತಲೆ ಕೆಡಿಸಿಕೊಳ್ಳುತ್ತಾರೆ. ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಮಾತ್ರ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ಶಾಸ್ತ್ರೀಯ ಸ್ಥಾನ ಸಿಕ್ಕೇ ಹೋಯಿತೆಂಬ ಸಂಭ್ರಮದಲ್ಲಿರುವ ಸರ್ಕಾರಕ್ಕೆ ವಾಸ್ತವ ಸ್ಥಿತಿ ಗೊತ್ತಾಗುತ್ತಿಲ್ಲ'.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್‌ ಹೇಳಿದ್ದು ಹೀಗೆ: ರಿಟ್‌ ಅರ್ಜಿಗೆ ಪ್ರತಿವಾದಿಯಾಗಿಸಲು ಕೋರಿ ಮದ್ರಾಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದರಿಂದ ಆಗುವ ಅನುಕೂಲ-ಅನಾನುಕೂಲಗಳ ಬಗ್ಗೆ, ರಾಜ್ಯ ಸರ್ಕಾರವೇ ಪ್ರತಿವಾದಿಯಾಗಿ ಪಾಲ್ಗೊಂಡರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಆಲೋಚಿಸಲಾಗುತ್ತಿದೆ. ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರಿಗೆ ಈ ಬಗ್ಗೆ ಜವಾಬ್ದಾರಿ ವಹಿಸಲಾಗಿದೆ. ಕಾನೂನು ತಜ್ಞರ ಜತೆ ಅವರು ಚರ್ಚಿಸಿ, ಮುಖ್ಯಮಂತ್ರಿಗಳ ಬಳಿ ಮಾತಾಡುವುದಾಗಿ ತಿಳಿಸಿದ್ದಾರೆ. ಇಂಪ್ಲೀಡಿಂಗ್‌ ಅವರಿಗೆ ಬಿಟ್ಟ ಸಂಗತಿ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದು ಹೀಗೆ: ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ಮದ್ರಾಸ್‌ ಉಚ್ಚನ್ಯಾಯಾಲಯಕ್ಕೆ ಪ್ರತಿವಾದಿಯಾಗಿಸಲು ಹಾಗೂ ಗಾಂಧಿಯವರ ರಿಟ್‌ ಅರ್ಜಿ ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಅಗತ್ಯವಿರುವ ಅಫಿಡವಿಟ್‌ಗೆ ತಾನು ಸಹಿ ಹಾಕಿದ್ದೇನೆ. ಅಡ್ವೋಕೇಟ್‌ ಜನರಲ್‌ ಉದಯಹೊಳ್ಳ ಅವರು ಕಾನೂನು ತಜ್ಞರ ಜತೆ ಚರ್ಚಿಸಿ, ನ್ಯಾಯವಾದಿಗಳನ್ನು ನೇಮಿಸಲಿದ್ದಾರೆ. ರಿಟ್‌ ಅರ್ಜಿ ವಜಾ ಮಾಡಿಸಲು ಬೇಕಾದ ಎಲ್ಲಾ ಪುರಾವೆಗಳನ್ನು ಪ್ರಾಧಿಕಾರ ಒದಗಿಸಲಿದೆ.
ಈ ಎಲ್ಲಾ ಹೇಳಿಕೆ, ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶಾಸ್ತ್ರೀಯ ಸ್ಥಾನದ ಅಸ್ತಿತ್ವವನ್ನು ವಿವೇಚಿಸಬೇಕಿದೆ. ಕನ್ನಡಿಗರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು 31-10-08ರಂದು ಗೆಜೆಟ್‌ ಪ್ರಕಟಣೆ ಹೊರಡಿಸಿ ಕನ್ನಡ ಮತ್ತು ತೆಲುಗು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಸದರಿ ಪ್ರಕಟಣೆಯಲ್ಲಿನ ಕೊನೆಯ ಒಕ್ಕಣಿಕೆ `ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿರುವ ರಿಟ್‌ ಅರ್ಜಿ(ಆಗಸ್ಟ್‌ನಲ್ಲಿ ಗಾಂಧಿ ಸಲ್ಲಿಸಿದ ರಿಟ್‌) ಪ್ರಕರಣದ ತೀರ್ಮಾನಕ್ಕೆ ಒಳಪಟ್ಟೇ ಗೆಜೆಟ್‌ ಪ್ರಕಟಣೆ ಹೊರಡಿಸಲಾಗಿದೆ' ಎಂದಿದ್ದು, ರಿಟ್‌ ಅರ್ಜಿ ವಜಾಗೊಳ್ಳದೇ ಶಾಸ್ತ್ರೀಯ ಸ್ಥಾನ ಮಾನ ದಕ್ಕುವುದೇ ಇಲ್ಲ.
ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಕೇಂದ್ರ ಸರ್ಕಾರವು ಗೆಜೆಟ್‌ ಪ್ರಕಟಣೆ ಹೊರಡಿಸಿರುವುದರ ಸಿಂಧುತ್ವ ಪ್ರಶ್ನಿಸಿ 27-11-08ರಂದು ಗಾಂಧಿ ಅವರು 40 ಅಡಕಗಳುಳ್ಳ ಮತ್ತೊಂದು ರಿಟ್‌ ಅರ್ಜಿ ಸಲ್ಲಿಸಿದ್ದರು. ಕೇಂದ್ರದ ಇಬ್ಬರು ಸಚಿವರು, ಶಿಫಾರಸ್ಸು ಸಮಿತಿಯ 9 ಮಂದಿ ಸದಸ್ಯರನ್ನು ಪ್ರತಿವಾದಿಯಾಗಿ ಉಲ್ಲೇಖಿಸಲಾಗಿತ್ತು. ಈ ರಿಟ್‌ ಸಲ್ಲಿಕೆಯಾಗಿ 2 ತಿಂಗಳು ಕಳೆದಿದ್ದರೂ `ಶಾಸ್ತ್ರೀಯ ಸ್ಥಾನ ಸಿಕ್ಕಿದ ಸಂಭ್ರಮ'ದಲ್ಲಿರುವ ರಾಜ್ಯ ಸರ್ಕಾರ ಈ ಬಗ್ಗೆ ಪ್ರತಿವಾದಿಯಾಗಿ ಪಾಲ್ಗೊಳ್ಳಲು ಮದ್ರಾಸ್‌ ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಇಂಪ್ಲೀಡಿಂಗ್‌(ಪ್ರತಿವಾದಿಯಾಗಿಸಲು ಕೋರಿ) ಮಾಡಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಬೇಕಾದ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಶಾಸ್ತ್ರೀಯ ಸ್ಥಾನ ಉಳಿಯುವುದು ಅನುಮಾನವಾಗಿದೆ. ಈ ರಿಟ್‌ ಅರ್ಜಿ ಕೇಂದ್ರ ಸರ್ಕಾರಕ್ಕೆ ಯಾವುದೇ ಆಸ್ಥೆ ಇಲ್ಲ. ಪ್ರತಿವಾದಿಗಳಾಗಿರುವ ಕೇಂದ್ರ ಮಾನವ ಸಂಪನ್ಮೂಲ ಮತ್ತು ಗೃಹಸಚಿವರಿಗೆ ಇದು ಬೇಕಾಗಿಲ್ಲ. ಯಾರೂ ಕನ್ನಡದವರಿಲ್ಲದೇ ಇರುವುದರಿಂದ ಶಿಫಾರಸ್ಸು ಸಮಿತಿ ಸದಸ್ಯರಿಗೆ ಇದರ ಉಸಾಬರಿ ಬೇಕಿಲ್ಲ.
ಗಾಂಧಿ ಸಲ್ಲಿಸಿದ ರಿಟ್‌ ಅರ್ಜಿಯಲ್ಲಿ ಶಿಫಾರಸ್ಸು ಸಮಿತಿಯ ಸಿಂಧುತ್ವವನ್ನೆ ಪ್ರಶ್ನಿಸಲಾಗಿದೆಯಲ್ಲದೇ, ಒತ್ತಡ, ಬೆದರಿಕೆಗೆ ಮಣಿದು ಶಿಫಾರಸ್ಸು ಮಾಡಲಾಗಿದೆ ಎಂದು ನ್ಯಾಯಾಲಯ ಬಯಸುವ ಪುರಾವೆಗಳನ್ನು ಮಂಡಿಸಲಾಗಿದೆ. ಕರ್ನಾಟಕ ಪ್ರತಿವಾದಿಯಾಗಿ ಸೇರಿಕೊಂಡು ಸಮರ್ಥವಾಗಿ ವಾದ ಮಂಡಿಸುವುದರಿಂದಲೇ ಮಾತ್ರ ಇದನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.

No comments: