Wednesday, October 22, 2008

ಮತಾಂತರ- ಅವಾಂತರ


ನೂರು ದೇವರುಗಳನೆಲ್ಲಾ ನೂಕಾಚೆ ದೂರ,
ಭಾರತಾಂಬೆಯೇ ನಮಗಿಂದು ಪೂಜಿಸುವ ಬಾರ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಶ್ರಮವಹಿಸಿ ದುಡಿಯಿರೈ ಸರ್ವ ಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು
ಸೇರಿರೈ ಮನುಜ ಮತಕೆ ವಿಶ್ವ ಪಥಕೆ
ಎಂದು ದಾರ್ಶನಿಕ ಕವಿ ಕುವೆಂಪು ಹೇಳಿ ದಶಕಗಳೇ ಮರೆಯಾಗಿ ಹೋದವು. ಆದರೆ ಮತ ವ್ಯಾಮೋಹ, ಧರ್ಮದ ದುರಭಿಮಾನ, ಅನ್ಯ ಧರ್ಮದ ದ್ವೇಷ ದಿನೇ ದಿನೇ ಮತ್ತಷ್ಟು ಉಲ್ಬಣಿಸುತ್ತಿದೆ. ಅದಕ್ಕೆ ಕಾರ್ಲ್‌ಮಾರ್ಕ್ಸ್‌ ಧರ್ಮವನ್ನು ಅಫೀಮು ಎಂದು ಕರೆದಿದ್ದರು.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಟಾಟೋಪ, ಹಿಂಸೆ, ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದರೆ ಧರ್ಮವೆಂಬುದು ಎಷ್ಟರಮಟ್ಟಿಗೆ ವಿಚ್ಛಿದ್ರಕಾರಿಯೆಂಬುದು ಸ್ಪಷ್ಟವಾಗುತ್ತದೆ. ದೇವರನ್ನು ಹತ್ತಿರದಿಂದ ಕಾಣುವ, ದೇವರನ್ನು ಸುಗಮವಾಗಿ ತಲುಪುವ ಭಕ್ತಿ ಮಾರ್ಗವು ಯಾವಾಗ ಸಾಂಸ್ಥಿಕವಾಗಿ ಆಳುವವರು ಹಾಗೂ ಸ್ವಹಿತಾಸಕ್ತ ಗುಂಪುಗಳ ಕೈಯ ಅಸ್ತ್ರವಾಗುತ್ತದೋ ಆವಾಗ ಇಂತಹ ಅವಘಡಗಳು ಸಂಭವಿಸುತ್ತವೆ.
ಭಕ್ತಿಯ ಪರವಶತೆಯಲ್ಲಿ ಮಿಂದು ಹೋದ ನೂರಾರು ವಚನಕಾರರು, ಪುರಂದರದಾಸರು, ಕನಕದಾಸರು, ಶಿಶುನಾಳ ಷರೀಫರು, ತುಕಾರಾಂ, ಸರ್ವಜ್ಞ, ವೇಮನ, ಇಂದಿಗೂ ಇರುವ ನೂರಾರು ತತ್ವಪದಕಾರರು, ಸೂಫಿಸಂತರು ಯಾವುದೇ ಧರ್ಮದ ಗೋಡೆ ಕಟ್ಟಿಕೊಂಡವರಲ್ಲ. ತನ್ನದು ಶ್ರೇಷ್ಠ, ಇತರರದ್ದು ಕನಿಷ್ಠವೆಂಬ ಅಹಂಕಾರವನ್ನು ತೋರಿಸಿದವರಲ್ಲ. ಭಕ್ತಿಯಷ್ಟನ್ನೇ ಉಂಡುಟ್ಟು, ಅದನ್ನು ಇತರರಿಗೂ ಹಂಚಿ ಹೋದವರು. ಧರ್ಮಭೀರುಗಳೆಂದರೆ ನಿಜಕ್ಕೂ ಅವರೆ.
ವಚನಕಾರ ಅಲ್ಲಮಪ್ರಭು ಹೇಳುವಂತೆ `ಭಕ್ತಿಯೆಂಬುದು ತೋರುಂಬ ಲಾಭ'ವಾದಾಗ ಇಂತಹ ಅಡ್ಡ ಪರಿಣಾಮಗಳು, ಸಾಮಾಜಿಕ ಅಸ್ವಸ್ಥತೆ ಘಟಿಸುತ್ತದೆ. ಪರಸ್ಪರ ದ್ವೇಷಿಸುವ ವಾತಾವರಣ ಸೃಷ್ಟಿಸಲಾಗುತ್ತದೆ. ಈಗ ನಡೆಯುತ್ತಿರುವ ಮತಾಂತರ ವಿವಾದ, ಪರವಿರೋಧ ಚರ್ಚೆಗಳು, ಪರಸ್ಪರ ಟೀಕೆಗಳು ಇವೆಲ್ಲವೂ ಧರ್ಮದ ವಿಕಾರತೆಗೆ ಕೈಗನ್ನಡಿಯಾಗಿದೆ ವಿನಃ ನಿಜಾರ್ಥದಲ್ಲಿ ಧರ್ಮದ ಆಚರಣೆಯಲ್ಲ. ಯಾರಿಗೂ ಧರ್ಮ, ಭಕ್ತಿ ಬೇಕಿಲ್ಲ. ಉರಿವ ಮನೆಯಲ್ಲಿ ತನಗೆಷ್ಟು `ಗಳ' ಸಿಗುತ್ತದೆ. ಆ ಜಂತಿ ಬಳಸಿಕೊಂಡ ತನ್ನ ಮನೆ, ಪಕ್ಷ ಹಾಗೂ ಮುಂದಿನ ಚುನಾವಣೆಯಲ್ಲಿ ಓಟು ಗಳಿಸಬಹುದೆಂಬುದು ಎಲ್ಲರ ಲೆಕ್ಕಾಚಾರವಾಗಿದೆ.
ಮತಾಂತರ- ಅವಾಂತರ
ಚರ್ಚ್‌ ಹಾಗೂ ನ್ಯೂಲೈಫ್‌ಗಳಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ನೆವ ಮುಂದಿಟ್ಟುಕೊಂಡು ರಾಜ್ಯದ ಹತ್ತಾರು ಕಡೆ ಕ್ರೈಸ್ತರ ಮೇಲೆ ಬಜರಂಗಿಗಳು, ವಿಶ್ವಹಿಂದು ಪರಿಷತ್‌ ಹಾಗೂ ಬಿಜೆಪಿ ಬೆಂಬಲಿತ ಮಂದಿ ಸರಣಿ ದಾಳಿ ನಡೆಸಿದರು. ದಾವಣಗೆರೆಯಲ್ಲಿ ಶುರುವಾದ ಈ ಅಮಾನವೀಯ ದಾಳಿ ಮೇನಿಯಾದಂತೆ ಇಡೀ ರಾಜ್ಯವನ್ನು ವ್ಯಾಪಿಸಿತು. ಒರಿಸ್ಸಾದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರತಿಸ್ಪಂದನೆಯಂತೆ ನಡೆದ ಇಲ್ಲಿನ ದಾಳಿಗೆ ಒರಿಸ್ಸಾದಂತೆ ಯಾವುದೇ ಪ್ರಚೋದನೆಯೂ ಇರಲಿಲ್ಲ.
ಒರಿಸ್ಸಾದಲ್ಲಿ ಸಂಘಪರಿವಾರಕ್ಕೆ ಸೇರಿದ ಸ್ವಾಮಿಯೊಬ್ಬರನ್ನು ಕೊಲೆಗೈದಿದ್ದು ಹಠಾತ್‌ ಕಾರಣವಾದರೆ ಅಲ್ಲಿನ ಪ್ರಕರಣಕ್ಕೆ ಅನೇಕ ವರ್ಷಗಳ ಇತಿಹಾಸವೇ ಇದೆ. ಬುಡಕಟ್ಟು ಸಮುದಾಯವನ್ನು ವಶೀಕರಣ ಮಾಡಿಕೊಳ್ಳಲು ನಕ್ಸಲೀಯ ಮಾವೋವಾದಿಗಳು, ಕ್ರೈಸ್ತ ಮತಾಂತರಿಗಳು ಹಾಗೂ ಸಂಘಪರಿವಾರದ ಮತಾಂತರಿಗಳು ನಿರಂತರವಾಗಿ ಯತ್ನ ನಡೆಸುತ್ತಿದ್ದಾರೆ.
ಜಾತೀಯ ಅವಮಾನ ಹಾಗೂ ಮೇಲ್ಜಾತಿಯ ಭೂಮಾಲೀಕರ ದಬ್ಬಾಳಿಕೆಯಿಂದ ನೊಂದ ಬುಡಕಟ್ಟು ಸಮುದಾಯ ಹಾಗೂ ಕೆಳಜಾತಿಗಳು ಈಗ ಎಲ್ಲರಿಗೂ ಬೇಕಾದವರಾಗಿದ್ದಾರೆ. ಭೂಮಾಲೀಕ ಪದ್ಧತಿ, ಕಠೋರ ಜಾತಿ ವ್ಯವಸ್ಥೆ ವಿರುದ್ಧ ಪ್ರಬಲ ಹೋರಾಟ ರೂಪಿಸುತ್ತಿರುವ ಮಾವೋವಾದಿಗಳು ಅಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಂಡು ವ್ಯವಸ್ಥೆಯ ವಿರುದ್ಧ ಜನರನ್ನು ಸಂಘಟಿಸುತ್ತಿರುವುದು ಹೊಸತೇನಲ್ಲ. ಕಳೆದ 20 ವರ್ಷಗಳಿಂದಲೂ ಸಿಪಿಐ(ಪಾರ್ಟಿ ಯೂನಿಟಿ) ಹಾಗೂ ಪೀಪಲ್ಸ್‌ ವಾರ್‌ ಅಲ್ಲಿ ಬಲಿಷ್ಠ ನೆಲೆ ಹೊಂದಿದ್ದವು. ನಕ್ಸಲೀಯ ಸಂಘಟನೆಗಳು ಒಗ್ಗೂಡಿ ಸಿಪಿಐ ಮಾವೋವಾದಿ ಎಂದು ಬದಲಾದ ಮೇಲೆ ನಕ್ಸಲೀಯರು ಈ ಪ್ರದೇಶದಲ್ಲಿ ಭದ್ರ ನೆಲೆ ರೂಪಿಸಿಕೊಂಡಿದ್ದಾರೆ.
ಕಷ್ಟದಲ್ಲಿರುವವವರು, ಜಾತಿಯ ಶೋಷಣೆಗೆ ಒಳಗಾದವರು, ರೋಗಿಗಳಿಗೆ ಶುಶ್ರೂಷೆ ನೀಡುತ್ತಿರುವ ಕ್ರೈಸ್ತ ಮಿಷನರಿಗಳು ಅಲ್ಲಿ ಕೆಲಸ ಮಾಡುತ್ತಿವೆ. ಕ್ರೈಸ್ತರ ಸೇವಾಮನೋಭಾವ ಹಾಗೂ ದೇವರನ್ನು ಕಾಣಲು ಜಾತೀಯ ಬೇಧವಿಲ್ಲದೇ ಅವರ ಸಮಾನ ಗುಣವನ್ನು ಕಂಡು ಬುಡಕಟ್ಟು ಸಮುದಾಯ ಮತಾಂತರವಾಗಿರುವುದು ಸುಳ್ಳಲ್ಲ. ಆದರೆ ಆಮಿಷ ಅಥವಾ ಬಲವಂತದ ಮತಾಂತರವೆಂಬುದು ಅಲ್ಲಿ ನಡೆಯುತ್ತಿಲ್ಲ.
ಈ ಇಬ್ಬರ ಪ್ರಾಬಲ್ಯ ಕಂಡ ಸಂಘಪರಿವಾರದವರು ಅಲ್ಲಿ ನೆಲೆಯೂರಲು ಬಯಸಿದ್ದು ಸತ್ಯ. ಜಾತಿಪದ್ಧತಿ, ಭೂಮಾಲೀಕ ಪದ್ಧತಿಯನ್ನು ನೇರವಾಗಿ ಬೆಂಬಲಿಸುವ ಸಂಘಪರಿವಾರದವರು ಕ್ರೈಸ್ತರಾಗಿ ಪರಿವರ್ತಿತರಾದವರನ್ನು ಮತ್ತೆ ಹಿಂದೂಧರ್ಮಕ್ಕೆ ಕರೆತರುವ ಯತ್ನ ಮಾಡುವಲ್ಲಿ ವಿಫಲರಾಗಿರುವುದು ಅಕ್ಷರಶಃ ಸತ್ಯ. ಈ ಹಿನ್ನೆಲೆಯಲ್ಲಿ ಸಂಘರ್ಷ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ಪಾದ್ರಿ ಗ್ರಹಾಂ ಸ್ಟೈನ್‌ರನ್ನು ಅವರಿಬ್ಬರ ಹಸುಗೂಸುಗಳ ಸಮೇತ ಜೀವಂತ ದಹಿಸಿದ ಪೈಶಾಚಿಕ ಚಾರಿತ್ರ್ಯವನ್ನು ಸಂಘಪರಿವಾರ ಹೊಂದಿದೆ.
ತಮ್ಮ ಸಂಘಟನಾತ್ಮಕ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಘಪರಿವಾರದ ಸ್ವಾಮಿಯನ್ನು ತಾವೇ ಹತ್ಯೆ ಮಾಡಿರುವುದಾಗಿ ಮಾವೋವಾದಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ. ಹಾಗಿರುವಾಗ ಸ್ವಾಮಿಯನ್ನು ಕ್ರೈಸ್ತರೇ ಕೊಂದಿದ್ದಾರೆಂದು ಆಪಾದಿಸಿ ಕ್ರೈಸ್ತರ ಮೇಲೆ ನಿರಂತರ ಹಲ್ಲೆ ನಡೆಸಿ, ಸಾಮಾಜಿಕ ಕ್ಷೋಭೆಗೆ ಸಂಘಪರಿವಾರದವರು ಕಾರಣರಾದರು. ಅಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದು ಸಂಘಪರಿವಾರದವರಿಗೆ ಮತ್ತಷ್ಟು ಬಲತಂದುಕೊಟ್ಟಿತ್ತು.
ಸೌಹಾರ್ದ ಕರ್ನಾಟಕ:
ಒರಿಸ್ಸಾದ ಪ್ರಕರಣ, ಅಲ್ಲಿನ ಸಾಮಾಜಿಕ ಹಿನ್ನೆಲೆಯೇ ಬೇರೆ ರೀತಿಯದು. ಆದರೆ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಕ್ರೆಸ್ತ ಮಿಷನರಿಗಳಿಗೆ ತನ್ನದೇ ಆದ ಇತಿಹಾಸವಿದೆ. ಕನ್ನಡದ ಅರಿವು ಮೂಡಿಸಿದ ಅನೇಕ ಮಿಷನರಿಗಳು ಇಂದಿಗೂ ಆದರ್ಶ ಪ್ರಾಯರಾಗಿದ್ದಾರೆ.
ಕನ್ನಡದ ಮೊದಲ ಪತ್ರಿಕೆ ಎನಿಸಿದ ಮಂಗಳೂರು ಸಮಾಚಾರ ಹಿಂದೆ ಮಿಷನರಿಗಳ ಪ್ರೇರಣೆಯಿದೆ. ಕನ್ನಡ-ಇಂಗ್ಲಿಷ್‌ ನಿಘಂಟು ನೀಡಿದ ರೆವರೆಂಡ್‌ ಕಿಟೆಲ್‌ರಿಂದ ಹಿಡಿದು ಇತ್ತೀಚೆಗೆ ಕನ್ನಡ ನಿಘಂಟು ನೀಡಿದ ಮಂಗಳೂರಿನವರೇ ಆದ ಪ್ರಶಾಂತ ಮಾಡ್ತಾರವರೆಗೆ ಉಜ್ವಲ ಕನ್ನಡ ಪ್ರೇಮದ ಪರಂಪರೆಯಿದೆ.
ಹಾಗೆಯೇ ಬಿ.ಎಲ್‌. ರೈಸ್‌ರಂತಹ ಮಹಾನುಭಾವರು ತನ್ನದೇ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಯುವ ಲೇಖಕರ ಪ್ರೋತ್ಸಾಹಕ್ಕೆ, ಅತ್ಯುತ್ತಮ ಕನ್ನಡ ಪುಸ್ತಕ ಪ್ರಕಟಣೆಗೆ ನೀಡಿದ ಕೊಡುಗೆ ಕನ್ನಡದ್ದೇ ಆದ ಒಂದು ವಿಶ್ವವಿದ್ಯಾನಿಲಯ ನೀಡುವ ಕೊಡುಗೆಗೆ ಸಮನಾದುದು.
ಕ್ರೈಸ್ತರು ರಾಜ್ಯದ ನಾನಾಭಾಗಗಳಲ್ಲಿ ನಡೆಸುವ ಶಾಲೆಗಳಂತೂ ನಾಡಿನ ಶೈಕ್ಷಣಿಕ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿವೆ. ಇಂಗ್ಲಿಷ್‌ ಮೀಡಿಯಂ ಮಾತ್ರವಲ್ಲದೇ ಕನ್ನಡ ಮೀಡಿಯಂ ಶಾಲೆಗಳನ್ನು ಆರಂಭಿಸಿ ತನ್ನದೇ ಆದ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿವೆ. ಶೇ.2 ರಷ್ಟಿರುವ ಕ್ರೈಸ್ತರು ತಮ್ಮ ಮಕ್ಕಳಿಗೆ ಮಾತ್ರ ಶಾಲೆ ನಡೆಸಿದ್ದರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಒಟ್ಟಾರೆ 50-100ನ್ನೂ ದಾಟುತ್ತಿರಲಿಲ್ಲ. ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು ಹೀಗೆ ರಾಜ್ಯದ ನಾನಾದಿಕ್ಕುಗಳಲ್ಲಿ ಕ್ರೈಸ್ತರ ಶಾಲಾ ಕಾಲೇಜುಗಳಲ್ಲಿ ಕನಿಷ್ಟವೆಂದರೂ 2-3 ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಇರುತ್ತದೆ. 40-50 ವರ್ಷಗಳಿಂದ ನಡೆಯುತ್ತಿರುವ ಶಾಲೆಯಲ್ಲಿ ಮತಾಂತರ ಮಾಡುವುದೇ ಆಗಿದ್ದರೆ ಇಂದು ಒಬ್ಬನೇ ಒಬ್ಬ ಮಧ್ಯವಯಸ್ಕ ಹಿಂದು ಕಾಣಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಕ್ರೈಸ್ತ ಶಾಲೆಗಳು ಜಾತ್ಯತೀತ ಮನೋಭಾವ ಹಾಗೂ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿವೆ. ಎಲ್ಲಿಯೂ ಮತಾಂತರದ ಚಟುವಟಿಕೆಗಳಾಗಲಿ, ಹಿಂದೂ ಧರ್ಮದ ಅವಹೇಳನ ಮಾಡಿರುವುದಾಗಲಿ ಕಾಣಬರುವುದಿಲ್ಲ. ಆ ರೀತಿಯ ದೂರುಗಳು ದಾಖಲಾಗಿಲ್ಲ.
ಇನ್ನು ಆಸ್ಪತ್ರೆ ಸಂಗತಿಯಂತೂ ಹೇಳುವುದೇ ಬೇಡ. ಸಮಾಜ ನಿಕೃಷ್ಟವಾಗಿ ಕಾಣುವ, ತಮ್ಮವರೇ ತಮಗೆ ಬೇಡವಾಗಿರುವಾಗ ಅಂತಹವರನ್ನು ಆಸ್ಪತ್ರೆ, ಅನಾಥಾಲಯದಲ್ಲಿ ಇಟ್ಟುಕೊಂಡು ಶುಶ್ರೂಷೆ, ಆರೋಗ್ಯ ಚಿಕಿತ್ಸೆ ನೋಡಿಕೊಳ್ಳುವ ಸಾರ್ಥಕ ಕೆಲಸ ಮಾಡುತ್ತಿವೆ.
ಹಿಂದೂಗಳೆಲ್ಲಾ ಒಂದು ಎನ್ನುವ ಸಂಘಪರಿವಾರದವರು ಹಿಂದು ಸಮಾಜದ ದುರ್ಬಲರು, ಅನಾಥರು, ವೃದ್ಧರು, ವಿವಿಧ ರೋಗಿಗಳಿಂದ ಬಳಲುತ್ತಿರುವವರಿಗೆ ಯಾಕೆ ಚಿಕಿತ್ಸೆ ನೀಡಿಲ್ಲ. ರಾಜ್ಯದ ಬಹುತೇಕ ಕಡೆ ಕ್ರೈಸ್ತರು ನಡೆಸುತ್ತಿರುವ ಆಸ್ಪತ್ರೆಗಳು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ರೋಗಿಗಳನ್ನು ಕಾಪಾಡುತ್ತಿವೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರನ್ನೆಲ್ಲಾ ಮತಾಂತರ ಮಾಡಿದ್ದರೆ ಅವರೆಲ್ಲಾ ಇಲ್ಲವೆನ್ನುತ್ತಿದ್ದರೆ. ಕ್ರೈಸ್ತರಾದರೆ ಮಾತ್ರ ಚಿಕಿತ್ಸೆ ಎಂದು ಷರತ್ತು ಒಡ್ಡಿದ್ದರೆ ಕ್ರೈಸ್ತರ ಜನಸಂಖ್ಯೆ ಕನಿಷ್ಠವೆಂದರೂ ಶೇ.20 ರಷ್ಟು ದಾಟುತ್ತಿತ್ತು. ಮತಾಂತರ ನಡೆಯುತ್ತಿದೆ ಎಂದು ಸಂಘಪರಿವಾರ ಬೊಬ್ಬೆ ಹೊಡೆಯುತ್ತಿದ್ದರೂ ಕ್ರೈಸ್ತರ ಜನಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ಇಳಿಮುಖವಾಗಿದೆ. ಬ್ರಿಟಿಷರಿದ್ದಾಗ ಶೇ.2.67ರಷ್ಟಿದ್ದ ಕ್ರೈಸ್ತರ ಪ್ರಮಾಣ 2001ರ ಜನಗಣತಿ ಪ್ರಕಾರ ಶೇ.2.42 ಆಗಿದೆ. ಅಲ್ಲಿಗೆ 0.23ರಷ್ಟು ಇಳಿಮುಖವಾಗಿದೆ.
ದಾಳಿ ಹಿಂದೆ?
ಇಷ್ಟೆಲ್ಲಾ ಸತ್ಯಗಳು ಮುಖಕ್ಕೆ ಹೊಡೆಯುವಂತೆ ಇದ್ದರೂ ಕ್ರೈಸ್ತರ ಮೇಲೆ ಹಲ್ಲೆ ನಡೆಸುವ ಕಾರಣವಾದರೂ ಏನಿತ್ತು. ಮೇಲ್ನೋಟಕ್ಕೆ ಇದು ಒರಿಸ್ಸಾ ಹಲ್ಲೆಯ ಪ್ರತಿಧ್ವನಿ ಎಂದೆನಿಸಿದರು ಸತ್ಯ ಬೇರೆಯೇ ಇದೆ.
ಸಂಘಪರಿವಾರ ರಾಜಕೀಯ ಮುಖವೇ ಆಗಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ತನ್ನಿಂತಾನೇ ರಾಜ್ಯದ ಜನ ಆಡಳಿತ ಪಕ್ಷದ ವಿರುದ್ಧವಾದ ನೆಲೆ ಹೊಂದಿರುತ್ತಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರದೇ ಇದ್ದಾಗ, ನಮ್ಮ ಮನೆಮುಂದಿನ ರಸ್ತೆ, ಚರಂಡಿ ಸ್ವಚ್ಛವಾಗದೇ ಇದ್ದಾಗ, ಕುಡಿಯಲು ನೀರು ಸಿಗದೇ ಇದ್ದಾಗ, ಕೈಗೆ ಬರುವ ಸಂಬಳದಲ್ಲಿ ಜೀವನ ನಡೆಸುವುದು ದುಸ್ತರವಾದಾಗ ಸಹಜವಾಗ ಜನ ಆಡಳಿತಾರೂಢ ಪಕ್ಷದ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅದು ಕಾಂಗ್ರೆಸ್‌ ಇರಲಿ, ಬಿಜೆಪಿ ಇರಲಿ ಅಥವಾ ಕಮ್ಯನಿಸ್ಟರೇ ಇರಲಿ. ಜನರಿಗೆ ಆಳುವ ಪಕ್ಷದ ಸಿದ್ಧಾಂತ ಮುಖ್ಯವಾಗಿರುವುದಿಲ್ಲ. ತಾವು ತಿನ್ನುವ ಕೂಳಿಗೆ ಸಂತ್ರಸ್ತಪಡಬೇಕಾದಾಗ, ರಸ್ತೆಯಲ್ಲಿ ಓಡಾಡುವ ಸ್ಥಿತಿಯಿಲ್ಲದೇ ಇದ್ದಾಗ ಅಧಿಕಾರದಲ್ಲಿರುವ ಪಕ್ಷದ ಬಗ್ಗೆ ಅಸಮಾಧಾನ, ಸಿಟ್ಟು, ಆಕ್ರೋಶ ತೋರ್ಪಡಿಸುತ್ತಾರೆ.
ಅಧಿಕಾರಕ್ಕೇರಿದ ನೂರು ದಿನಗಳಲ್ಲಿ ಕೇವಲ ಬೊಗಳೆ ಬಿಡುತ್ತಾ ಸಾಗಿದ ಬಿಜೆಪಿ ಸರ್ಕಾರದ ಬಗ್ಗೆ ಸಣ್ಣ ಪ್ರಮಾಣದ ಅಸಮಾಧಾನದ ಹೊಗೆ ಏಳುತ್ತಿದೆ. ಗಣಿದೊರೆಗಳ ಕೈಯಲ್ಲಿ ಸರ್ಕಾರ ಕುಣಿಯುತ್ತಿರುವುದು ಜನರಲ್ಲಿ ಅಸಹನೆ ಹುಟ್ಟಿಸಿದೆ. ನೈತಿಕತೆ, ಸೈದ್ಧಾಂತಿಕತೆ ಮೀರಿ ಅನ್ಯ ಪಕ್ಷದವರನ್ನು ಕರೆತರುತ್ತಿರುವುದು ಅಸಹ್ಯ ಹುಟ್ಟಿಸಿದೆ. ಇದು ಬಿಜೆಪಿ ನಿಜಬಣ್ಣವನ್ನು ಬಯಲುಗೊಳಿಸಿದೆ. ಬಿಜೆಪಿ ನಾಯಕರ ಜನಪ್ರಿಯತೆ ಕಡಿಮೆಯಾಗಿ ಆಕ್ರೋಶ ಮಡುಗಟ್ಟತೊಡಗಿದೆ.
ಜನರ ಆಕ್ರೋಶದ ದಿಕ್ಕು, ಗಮನವನ್ನು ಬೇರೆಡೆಗೆ ಸೆಳೆಯಲು ಆಳುವವರ್ಗಗಳು ಈ ರೀತಿಯ ತಂತ್ರವನ್ನು ಹೂಡುವುದು ಇತಿಹಾಸದಲ್ಲಿ ಇದೇ ಮೊದಲಲ್ಲ. ವಿಶ್ವದ ಯಾವುದೇ ದೇಶದ ಚರಿತ್ರೆಯಲ್ಲಿ ಜನರ ಹೋರಾಟದ ದಿಕ್ಕು ತಪ್ಪಿಸಲು, ವ್ಯವಸ್ಥೆಯ ವಿರುದ್ಧದ ಅಸಹನೆಯ ಸಿಟ್ಟನ್ನು ಹಾದಿ ತಪ್ಪಿಸಲು ಇಂತಹ ಉಪಾಯಗಳನ್ನು ವ್ಯವಸ್ಥೆ ಹುಟ್ಟು ಹಾಕುತ್ತಾ ಬಂದಿದೆ.
ಕ್ರೈಸ್ತರ ಮೇಲೆ ಸಂಘಪರಿವಾರ ಕೃಪಾಪೋಷಿತ ಹಲ್ಲೆ ಇದೇ ರೀತಿಯದು. ಬಿಜೆಪಿ ಬಗೆಗಿನ ಅಸಮಾಧಾನವನ್ನು ಕ್ರೈಸ್ತರ ಮೇಲೆ ತಿರುಗಿಸುವಂತೆ ಮಾಡುದರ ಪ್ರಚೋದನೆ ಇದು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವದರಿಂದ ಸಂಘಪರಿವಾರದ ಕೃತ್ಯಗಳನ್ನು ಪೊಲೀಸರು ಕೈಕಟ್ಟಿ ಸುಮ್ಮನೇ ನೋಡುತ್ತಾ ನಿಂತರು. ಕೆಲವೆಡೆ ಪರೋಕ್ಷವಾಗಿ ಬೆಂಬಲಿಸಿದರು. ಹಲ್ಲೆ ನಡೆಯುತ್ತಿದ್ದಾಗಲೂ ಅದನ್ನು ತಡೆಯಲು ವ್ಯಾಪಕ ಬಂದೋಬಸ್ತ್‌ ಕ್ರಮ ಕೈಗೊಳ್ಳಲೇ ಇಲ್ಲ.
ಪ್ರೆಸ್ಸರ್‌ ಕುಕ್ಕರ್‌ ಸಿಡಿಯುವುದನ್ನು ತಪ್ಪಿಸಲು ಸೇಫ್ಟಿವಾಲ್‌ ಫಿಕ್ಸ್‌ಮಾಡಿರುತ್ತಾರೆ. ಆಳುವವರ್ಗಗಳು ಕ್ರೈಸ್ತರು, ಮುಸ್ಲಿಮರ ಮೇಲೆ ಹಲ್ಲೆಯಂತ ಸೇಫ್ಟಿವಾಲ್‌ಗಳನ್ನು ಬಳಸುತ್ತಾರೆಂಬುದಕ್ಕೆ ಇದು ಉತ್ತಮ ನಿದರ್ಶನ.
ನಾಚಿಕೆಗೇಡು:
ಸಂಘಪರಿವಾರ ಚರ್ಚ್‌ಗಳ ಮೇಲೆ ಮಾತ್ರ ಹಲ್ಲೆ ನಡೆಸಲಿಲ್ಲ. ಪ್ರಾರ್ಥನೆಗಾಗಿ ಬಂದಿದ್ದ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿತು. ಮನೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ದಂಪತಿಗಳನ್ನು ಮಾರಾಮಾರಿ ಥಳಿಸಿತು. ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೂ ದಾಳಿ ಮಾಡಿತು. ಇಷ್ಟೆಲ್ಲಾ ಆದರೂ ಮಹತ್ವದ ಹೊಣೆಗಾರಿಕೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ( ಅವರೇ ಹೇಳಿಕೊಂಡಂತೆ 6 ಕೋಟಿ ಕನ್ನಡಿಗರ ಮುಖ್ಯಮಂತ್ರಿ) ಯಡಿಯೂರಪ್ಪ ಹಾಗೂ ಗೃಹಸಚಿವ ವಿ.ಎಸ್‌. ಆಚಾರ್ಯ, ಗಲಭೆ ನಿಯಂತ್ರಿಸುವ ಬದಲಿಗೆ, ಮತಾಂತರ ನಡೆಯುತ್ತಿರುವುದೇ ಹಲ್ಲೆಗೆ ಕಾರಣ ಎಂದು ಪ್ರಕರಣವನ್ನು ವಿಮರ್ಶೆ ಮಾಡಲು ತೊಡಗಿದರು. ಹಲ್ಲೆಗೆ ಕಾರಣ ಹುಡುಕತೊಡಗಿದರು.
ಇದಕ್ಕಿಂತ ನಾಚಿಕೆಗೇಡಿನ ಪ್ರಕರಣ ಇನ್ನೊಂದು ಇರಲಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘಟನೆಗೆ ಕಾರಣ ಹುಡುಕುವುದಲ್ಲ. ಅನ್ಯಾಯ, ದೌರ್ಜನ್ಯ ನಡೆದಾಗ ಅದನ್ನು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು. ಘಟನೆಯ ವಿಶ್ಲೇಷಣೆಯನ್ನು ಮಾಡಲು ಸಮಾಜಶಾಸ್ತ್ರಜ್ಞರು, ಮನಃ ಶಾಸ್ತ್ರಜ್ಞರು ಇರುತ್ತಾರೆ. ಅಥವಾ ಪೊಲೀಸ್‌ ಇಲಾಖೆ ಇರುತ್ತದೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಮಾತನಾಡುವುದನ್ನು ಕೇಳಿದ್ದರೆ ಇವರಿಬ್ಬರು ಸಂಘಪರಿವಾರದ ದುಷ್ಕೃತ್ಯದ ಹಿಂದೆ ನಿಂತಿರುವುದು ಸ್ಪಷ್ಟವಾಗುತ್ತಿತ್ತು.
ಮತಾಂತರ:
ಹಾಗಂತ ದೇಶದಲ್ಲಿ ಮತಾಂತರ ಹೊಸದಲ್ಲ. ಮಾನವ ಚರಿತ್ರೆ ಆರಂಭವಾದ ಕಾಲದಿಂದಲೂ ಮತಾಂತರ ನಡೆದೇ ಇದೆ. ಬುಡಕಟ್ಟು ಸಮುದಾಯವನ್ನು ವೈದಿಕ ಧರ್ಮಕ್ಕೆ ಮತಾಂತರಿರುವ ಮೂಲಕ ಆರಂಭದಲ್ಲಿ ಆರ್ಯರು ವೈದಿಕ ಮತವನ್ನು ಪ್ರತಿಷ್ಠಾಪಿಸಿದರು.ವೈದಿಕ ಮತ ಅಂಧಾಚರಣೆಗಳ ವಿರುದ್ಧ ಹುಟ್ಟಿಕೊಂಡ ಬೌದ್ಧ ಹಾಗೂ ಜೈನ ಮತಗಳು ಮತಾಂತರವನ್ನು ನಿರ್ಬಿಡೆಯಿಂದ ಮಾಡಿದವು ಅಥವಾ ಜನರೇ ಮನಸೋತು ಮತಾಂತರಗೊಂಡರು. ಮತ್ತೆ ಬಂದ ವೈದಿಕ ಮತಾನುಯಾಯಿಗಳಾದ ಶಂಕರಚಾರ್ಯ, ಮಧ್ವಾಚಾರ್ಯರು ಬೌದ್ಧ, ಜೈನರನ್ನು ವಾಪಸ್‌ ಕರೆತಂದರು. ಭಾರತದಲ್ಲೇ ಜನಿಸಿದ ಬೌದ್ಧಮತ ಇಂದು ಕಣ್ಮರೆಯಾಗಲು ವೈದಿಕ ಮತಾನುಯಾಯಿಗಳೇ ಕಾರಣರಾದರು.
ಮತ್ತೆ ವೈದಿಕ ಮತ ವಿರೋಧಿಸಿ ಅಸ್ತಿತ್ವಕ್ಕೆ ಬಂದ ವೀರಶೈವ ಧರ್ಮ ಮತಾಂತರ ಮಾಡಿತು. ನೂರಾರು ಕೆಳಜಾತಿಗಳು ಲಿಂಗಾಯಿತರಾಗಿ ಪರಿವರ್ತಿತರಾದರು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಮಾರಿನವರು ಹಿಂದೆಂದೋ ಹಿಂದೂ ಧರ್ಮದಿಂದ ವೀರಶೈವ ಧರ್ಮಕ್ಕೆ ಮತಾಂತರಗೊಂಡವರೆ.
ಒಂದು ವೇಳೆ ನೂರಾರು ವರ್ಷಗಳ ಈ ದೇಶವನ್ನು ಆಳಿದ ಮುಸ್ಲಿಂ ಹಾಗೂ ಕ್ರೈಸ್ತ ರಾಜರು ಮತಾಂತರವನ್ನು ಮಾಡಿದ್ದೇ ಆಗಿದ್ದರೆ ಭಾರತದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರು ಹಿಂದುಗಳಾಗಿ ಉಳಿಯುತ್ತಿರಲಿಲ್ಲ. ಮುಸ್ಲಿಮರ ಸಂಖ್ಯೆ ಶೇ.14 ಹಾಗೂ ಕ್ರೈಸ್ತರ ಸಂಖ್ಯೆ ಶೇ.2.4ರಷ್ಟು ಇರುತ್ತಿರಲಿಲ್ಲ. ಈ ಸತ್ಯ ಜನರಿಗೆ ಅರ್ಥವಾಗಬೇಕಾಗಿದೆ. ಮತಾಂತರ ನಡೆಯುತ್ತಿರುವುದು ಶುದ್ಧ ಸುಳ್ಳಾಗಿದೆ. ಅಸ್ತಿತ್ವವನ್ನು ಮರುಸ್ಥಾಪಿಸಿಕೊಳ್ಳಲು, ವ್ಯವಸ್ಥೆ ವಿರುದ್ಧದ ಆಕ್ರೋಶವನ್ನು ಶಮನಗೊಳಿಸಲು ಸಂಘಪರಿವಾರ ನಡೆಸಿದ ಹುನ್ನಾರ ಇದೆಂಬುದು ಸ್ಪಷ್ಟವಾಗಬೇಕಾಗಿದೆ.


ಭಯ ಉತ್ಪಾದನೆ: ಆ ಮುಖ ಈ ಮುಖ


ಭಯ ಉತ್ಪಾದನೆ: ಆ ಮುಖ ಈ ಮುಖ



ನಿಮ್ಮ ಮನೆಯ
ಒಂದು ಕೋಣೆಯಲ್ಲಿ
ಬೆಂಕಿ ಬಿದ್ದಿದ್ದರೆ
ಮತ್ತೊಂದು ಕೋಣೆಯಲ್ಲಿ
ಸುಮ್ಮನೆ ಮಲಗಿ
ನೆಮ್ಮದಿಯಿಂದ ನಿದ್ದೆ ಹೋಗಬಲ್ಲಿರಾ?

ಭಯೋತ್ಪಾದನೆಯೆಂಬುದು ದೇಶದ ನರನಾಡಿಗಳನ್ನು ವ್ಯಾಪಿಸುತ್ತಿರುವ ಈ ವಿಕೃತ ಹೊತ್ತಿನಲ್ಲಿ ಈ ಪ್ರಶ್ನೆಗೆ ರಾಜಕಾರಣಿಗಳು ಮತ್ತು ಭಯೋತ್ಪಾದಕರ ಹೊರತಾಗಿ ಮತ್ತಾರೂ `ಹೋಗಬಲ್ಲೆವು' ಎಂದು ಯಾರೂ ಹೇಳಲಾರರು.
ಎಲ್ಲಿ ಯಾವಾಗ ಸ್ಪೋಟವಾಗುತ್ತದೋ ನಮ್ಮ ಕಾಲುಕೈಗಳು ಹೊಂದಿಸಲು ಸಿಗದಂತೆ ಚೂರುಪಾರಾಗಿ ಛಿದ್ರಗೊಂಡು ಹರಿದು ಹಾರಿಹೋಗಬಲ್ಲವೋ ಎಂಬ ಭಯದಲ್ಲಿಯೇ ಎಲ್ಲರೂ ದಿನದೂಡಬೇಕಾದ ಭೀತಿಯಲ್ಲಿ ನಾವಿದ್ದೇವೆ. ಇದನ್ನು ನಿಗ್ರಹಿಸಬಲ್ಲ ಶಕ್ತಿಯುಳ್ಳ ರಾಜಕಾರಣಿಗಳು ಆರೋಪ-ಪ್ರತ್ಯಾರೋಪ, ಸಮರ್ಥನೆ-ನಿರಾಕರಣೆ, ದೂಷಣೆ-ಸ್ಪಷ್ಟನೆಯಲ್ಲಿಯೇ ಇಡೀ ಕಾಲವನ್ನು ವ್ಯಯಿಸುತ್ತಿದ್ದಾರೆ. ಭಯೋತ್ಪಾದನೆಯೆಂಬುದು ನಮ್ಮೆಲ್ಲರ ಮೇಲೆ ನಿರಂತರ ಚಾಚಿರುವ ಕರಾಳ ನೆರಳು ಎಂದು ಯಾರಿಗೂ ಅನ್ನಿಸುತ್ತಲೇ ಇಲ್ಲ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಸಮುದಾಯದ ಓಟುಗಿಟ್ಟಿಸಲು `ಯಾವ ಮಾತು'ಗಳು ಎಷ್ಟರಮಟ್ಟಿಗೆ ಸಫಲವಾಗಬಹುದೆಂಬ ಅಕ್ಷರ ವ್ಯಭಿಚಾರದಲ್ಲಿಯೇ ಎಲ್ಲರೂ ತೊಡಗಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಕಮ್ಯುನಿಸ್ಟರು, ಎಸ್ಪಿ ಹೀಗೆ ಯಾವುದೇ ಪಕ್ಷಗಳೂ ಇದರಿಂದ ಹೊರತಾಗಿಲ್ಲ. ಎಲ್ಲರೂ `ಮತಬ್ಯಾಂಕ್‌'ನತ್ತಲೇ ಕಣ್ಣಿಟ್ಟು, ಬಾಯ್ತೆರೆಯುತ್ತಿದ್ದಾರೆ.
`ಭಾರತವೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿಲ್ಲ. ಭಯೋತ್ಪಾದಕರು ಭಾರತದ ವಿರುದ್ಧ ಹೋರಾಡುತ್ತಿದ್ದಾರೆ. ರಾಜಕಾರಣಿಗಳು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿಲ್ಲ. ಅವರು ಪರಸ್ಪರ ಕಚ್ಚಾಡುತ್ತಿದ್ದಾರೆ. ಅವರು ಜನರ ಭದ್ರತೆ ಬಗ್ಗೆ ಚಿಂತಾಕ್ರಾಂತರಾಗಿಲ್ಲ. ಅವರ ಚಿಂತೆಯೇನಿದ್ದರೂ ಜನರ ಓಟಿನ ಮೇಲೆ. ಭಯೋತ್ಪಾದನೆಯ ವಿರುದ್ಧ ಅವರ ಮಾತಿನ ಸಮರ ಏನಿದ್ದರೂ ಕೇವಲ ಮತಗಳಿಕೆಗಷ್ಟೇ ಸೀಮಿತ'( ಔಟ್‌ಲುಕ್‌ನಲ್ಲಿ ರಾಜೇಂದರ್‌ ಪುರಿ).
ಬದಲಾದ ಭಯೋತ್ಪಾದನೆ:
ಗುಜರಾತ್‌ ಗಲಭೆ ನಂತರ ಭಯೋತ್ಪಾದನೆಯ ವ್ಯಾಖ್ಯೆಗಳೇ ಬದಲಾಗಿವೆ. ಸಿಮಿ, ಇಂಡಿಯನ್‌ ಮುಜಾಹಿದಿನ್‌ ಸಂಘಟನೆಗಳ ಹೆಸರು ಬಾಂಬ್‌ಸ್ಪೋಟ ನಡೆದಾಗೆಲ್ಲಾ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಅದರೆ ಜತೆಗೆ ಸಂಘಪರಿವಾರ ಪ್ರೇಷಿತ ಕೆಲವು ಸಂಘಟನೆಗಳು ಆತ್ಮಹತ್ಯಾ ದಳದ ರಚನೆಗೆ ಮುಂದಾಗುತ್ತಾ ಕ್ರೈಸ್ತರ ಮೇಲಿನ ದಾಳಿಗೆ ತಾವೇ ಬಾಧ್ಯಸ್ಥರು ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿವೆ. ವಿಧ್ವಂಸಕ ಕೃತ್ಯಗಳ ಮೇಲಾಟದಲ್ಲಿ ಸತ್ಯವನ್ನು ಬಹಿರಂಗ ಪಡಿಸಬೇಕಾದ ಪೊಲೀಸರು ಯಾರ ಮೇಲೋ ಗೂಬೆ ಕೂರಿಸಿ, ತಮ್ಮ ಜವಾಬ್ದಾರಿಯನ್ನು ಮುಗಿಸಿಬಿಡುವ ಆತುರ ತೋರುತ್ತಿದ್ದಾರೆ.
2-3 ದಶಕಗಳ ಹಿಂದೆ ಭಯೋತ್ಪಾದನೆ ಎಂದರೆ ಅದು ತಮಿಳು ಉಗ್ರರೋ, ಅಸ್ಸಾಂನ ಉಲ್ಫಾ ಉಗ್ರರೋ, ಪಂಜಾಬಿನ ಖಾಲಿಸ್ತಾನ್‌ ಉಗ್ರರೋ, ನಾಗಾ ಬಂಡುಕೋರರೋ ಅಥವಾ ನಕ್ಸಲ್‌ ಉಗ್ರರ ಕೃತ್ಯವೆಂದೇ ಪರಿಭಾವಿಸುವ ಕಾಲವೊಂದಿತ್ತು. ಆದರೀಗ ಕಾಲ ಬದಲಾಗಿದೆ. ಇಂದು ದೇಶದುದ್ದಕ್ಕೂ ಎಲ್ಲೇ ಬಾಂಬ್‌ಸ್ಪೋಟ, ವಿಚ್ಛಿದ್ರಕಾರಿ ಘಟನೆ ನಡೆದಾಗ ಅದರ ಹಿಂದೆ ಮುಸ್ಲಿಂ ಬಣ್ಣವುಳ್ಳ ಸಂಘಟನೆಯೊಂದರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಪೊಲೀಸ್‌ ವೈಫಲ್ಯವೆಂಬ ಆರೋಪ ತಪ್ಪಿಸಿಕೊಳ್ಳಲು ನಡೆಸಲಾಗುವ ಬಂಧನ ಎಂದಿನ ಸರಳೀಕೃತ ಮಾದರಿಯಲ್ಲಿಯೇ ನಡೆಯುತ್ತಿರುತ್ತದೆ. ಅದರಿಂದ ಮತ್ತೊಂದು ದುರಂತ ಘಟನೆ ಅಥವಾ ವಿಧ್ವಂಸಕ ಕೃತ್ಯ ನಿಲ್ಲುವುದಿಲ್ಲ. ದೇಶದ ಇನ್ನೊಂದು ಮೂಲೆಯಲ್ಲಿ ಅದೇ ಮಾದರಿಯ ಘಟನೆಗಳು ನಡೆದಾಗ ಮತ್ತೆ ಅದೇ ರೀತಿಯ ಬಂಧನಗಳು, ವರ್ಣರಂಜಿತ ಹೇಳಿಕೆಗಳು, ಆಕರ್ಷಕ ಫೋಟೋಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ವಿಸ್ಪೋಟಗಳಿಗೆ ನಿಲುಗಡೆ ಮಾತ್ರ ಕಾಣುವುದಿಲ್ಲ.
ಅಧಿಕಾರರೂಢ ಗೃಹಮಂತ್ರಿಗಳ ರಾಜೀನಾಮೆಗೆ ಪ್ರತಿಪಕ್ಷಗಳ ಮುಖಂಡರು ಆಗ್ರಹಿಸುತ್ತಾರೆ. ಗೃಹಮಂತ್ರಿಗಳು ಪೊಲೀಸ್‌, ಬೇಹುಗಾರಿಕೆ ಬಲಿಷ್ಠವಾಗಿರುವ ಬಗ್ಗೆ ಸಮರ್ಥನೆ ನೀಡುತ್ತಾರೆ. ಅದೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ವೈಫಲ್ಯ-ಸಾಫಲ್ಯಗಳ ಚರ್ಚೆಯಲ್ಲಿ ದಿನದೂಡುತ್ತಿರುವಾಗಲೇ ಮತ್ತೊಂದು ಬಾಂಬ್‌ಸ್ಪೋಟ ತಲ್ಲಣ ಮೂಡಿಸಿ, ಮತ್ತೊಂದಿಷ್ಟು ಅಮಾಯಕರನ್ನು ಬಲಿತೆಗೆದುಕೊಂಡು ರಕ್ತದೋಕುಳಿ ಹರಿಸಿರುತ್ತದೆ.
ಪೋಟಾ, ಟಾಡಾದಂತಹ ಕಠಿಣ ಕಾಯ್ದೆಗಳ ಅಗತ್ಯವನ್ನು ಪ್ರತಿಪಾದಿಸಲಾಗುತ್ತದೆ. ಇರುವ ಕಾಯ್ದೆಗಳೇ ಸಮರ್ಪಕ ಜಾರಿಯಾಗದೇ ಇರುವಾಗ ಹೊಸ ಕಾಯ್ದೆಗಳನ್ನು ತಂದು ಮುಗ್ಧರ ಬಂಧನಕ್ಕೆ, ಅಮಾಯಕರ ಮೇಲೆ ದೌರ್ಜನ್ಯಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಲಾಗುತ್ತದೆ. ಇರುವ ಕಾಯ್ದೆಗಳಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗ ಹೊಸ ಕಾಯ್ದೆಗಳು ಯಾಕೆ ಬೇಕೆಂದು ಯಾರೂ ಪ್ರಶ್ನೆ ಕೇಳುವುದಿಲ್ಲ. ಕರ್ನಾಟಕ ತರಬೇಕೆಂದಿರುವ ಕೋಕಾ ಕಾಯ್ದೆ ವಿರೋಧಿಸುತ್ತಿರುವ ಕೇಂದ್ರದ ಕಾಂಗ್ರೆಸ್‌ ಸರ್ಕಾರ, ಮಹಾರಾಷ್ಟ್ರದಲ್ಲಿ ಅಂಥದೇ ಕಾಯ್ದೆ ತರಲು ಸಮ್ಮತಿ ಸೂಚಿಸುತ್ತದೆ. ಟಾಡಾ ಇದ್ದಾಗ ಆಗಿರುವ ಅನಾಹುತಗಳ ಅರಿವಿದ್ದರೂ ಬಿಜೆಪಿಯ ರಾಷ್ಟ್ರೀಯ ಮುಖಂಡರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಟಾಡಾ ಮರುಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ.
ಭಯೋತ್ಪಾದನೆಯ ಮೂಲ ಬೇರುಗಳನ್ನು ಕಿತ್ತೊಗೆಯದೇ ಅಲಂಕಾರಿಕ ಗಿಡಗಳ ರೆಂಬೆಕೊಂಬೆ ಕತ್ತರಿಸುವ ರೀತಿಯಲ್ಲಿ `ಕಟಿಂಗ್‌' ಮಾಡಿದರೆ ಏನು ಫಲ?
ಗುಡ್ಡ ಅಗೆದು...!
ಗುಡ್ಡ ಅಗೆದು ಇಲಿಯನ್ನೂ ಹಿಡಿಯಲಿಲ್ಲ ಎಂಬ ಕತೆ ಪೊಲೀಸರು, ಭಯೋತ್ಪಾದನಾ ನಿಗ್ರಹ ದಳಗಳದ್ದಾಗಿದೆ. `ಅಹಮದಾಬಾದ್‌ ಸರಣಿ ಬಾಂಬ್‌ ಸ್ಪೋಟದ ಮಾಸ್ಟರ್‌ ಮೈಂಡ್‌ ಬಂಧನ' ಎಂಬ ಸುದ್ದಿ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಬೆನ್ನಲ್ಲೇ ದೆಹಲಿಯಲ್ಲಿ ಸರಣಿ ಸ್ಪೋಟವಾಗಿರುತ್ತದೆ. ಅದರ ಮಗ್ಗುಲಲ್ಲೇ ಲೋಕಸಭೆ ಪ್ರತಿಪಕ್ಷ ನಾಯಕ ಎಲ್‌.ಕೆ. ಅಡ್ವಾಣಿ ಅವರು ನೀಡಿದ `ಗುಜರಾತ್‌ನಲ್ಲಿ ಬಂಧಿತ ಉಗ್ರರ ವಿಚಾರಣೆ ವೇಳೆ ದೆಹಲಿ ಸ್ಪೋಟದ ಸಂಚು ಬಯಲುಗೊಂಡಿರುವುದನ್ನು ನರೇಂದ್ರ ಮೋದಿಯವರು ಕೇಂದ್ರ ಗೃಹಸಚಿವರಿಗೆ ಸ್ಪಷ್ಟಪಡಿಸಿದ್ದರು. ಆದರೂ ಕೇಂದ್ರ ಅಪೇಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ವೈಫಲ್ಯ ಪ್ರದರ್ಶಿಸಿತು' ಎಂಬ ಆಪಾದನೆಯೂ ಪ್ರಕಟಗೊಂಡಿರುತ್ತದೆ.
ಮುಂಬೈ, ದೆಹಲಿ, ಸೂರತ್‌, ಅಹಮದಾಬಾದ್‌ ಕೊನೆಗೆ ಬೆಂಗಳೂರಿನವರೆಗೂ ಬಾಂಬ್‌ಸ್ಪೋಟದ ವಿಧ್ವಂಸಕ ಕೃತ್ಯ ನಡೆಯುತ್ತಲೇ ಇದೆ. ಹೀಗೆ ನಡೆದಾಗಲೆಲ್ಲಾ ಪೊಲೀಸ್‌ ವೈಫಲ್ಯವೆಂಬ ಹುಯಿಲು ಪ್ರತಿಪಕ್ಷಗಳಿಂದ ಕೇಳಿ ಬರುತ್ತದೆ. ಕೇಂದ್ರ ಗೃಹಸಚಿವರ ರಾಜಿನಾಮೆ ಒತ್ತಾಯದ ಕೂಗು ಮೊಳಗುತ್ತದೆ. ಹಿಂದೆ ಇದೇ ಬಿಜೆಪಿ ನೇತೃತ್ವದ ಎನ್‌ಡಿ ಎ ಸರ್ಕಾರವಿದ್ದಾಗ ಗೋಧ್ರಾ ಹತ್ಯಾಕಾಂಡ, ಅದರ ಬೆನ್ನಲ್ಲೇ ಗುಜರಾತ್‌ ನರಮೇಧ, ಅಕ್ಷರಧಾಮದ ಮೇಲೆ ದಾಳಿ. ಇದರ ಬೆನ್ನಲ್ಲೇ ಸಂಸತ್‌ನ ಮೇಲೆ ದಾಳಿಯೂ ನಡೆದಿತ್ತು. ಆಗಲೂ ಆಡಳಿತ ಪಕ್ಷ ವಿಫಲವಾಗಿದೆಯೆಂಬ ಕೂಗೆದ್ದಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಹಾಗಂತ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಯಾವ ಪಕ್ಷಗಳಿಂದಲೂ ನಡೆದಿಲ್ಲ, ನಡೆಯುತ್ತಿಲ್ಲವೆಂಬುದು ಸುಡುವಾಸ್ತವ.
ಆತ್ಮಹತ್ಯೆ, ರಸ್ತೆ ಅಪಘಾತಗಳು ಮಾಮೂಲಾಗಿರುವಂತೆಯೇ ಭಾರತೀಯರಿಗೆ ಈಚೆಗೆ ಬಾಂಬ್‌ಸ್ಪೋಟವೂ ನಿತ್ಯದ ಸಂಗತಿಯಾಗಿದೆ. ಭಯೋತ್ಪಾದಕರ ಹೆಸರಿನಲ್ಲಿ ನಡೆಯುವ ಬಂಧನವೂ ಸಹಜವೆಂಬಂತಾಗಿಬಿಟ್ಟಿದೆ.
ಈ ಎಲ್ಲಾ ವಿದ್ಯಮಾನಗಳನ್ನು ಪರ್ಯಾಲೋಚಿಸಿದಾಗ ಎರಡು ಸಂಗತಿಗಳು ಮೇಲ್ನೋಟಕ್ಕೆ ಕಂಡು ಬರುತ್ತವೆ. ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಬೊಬ್ಬಿಡುವುದು ಹಾಗೂ ಅವರು ತಮ್ಮ ನಿಷ್ಕ್ರಿಯತೆಯ ಅಪವಾದವನ್ನು ಹೋಗಲಾಡಿಸಲು ಯಾರನ್ನಾದರೂ ಬಂಧಿಸಿ, ಸುಲಭವಾಗಿ ಉಗ್ರರ ಹಣೆಪಟ್ಟಿ ಕಟ್ಟಿಬಿಡುವುದು.
ಗುಡ್ಡ ಅಗೆದಾಗ ಕನಿಷ್ಠ ಇಲಿಯಾದರೂ ಸಿಗಬೇಕು. ಆದರೆ ಪೊಲೀಸರು ನಡೆಸುವ ಕಾರ್ಯಾಚರಣೆಗಳಲ್ಲಿ ಕನಿಷ್ಠ ಇಲಿಗಳೂ ಸಿಗುವುದಿಲ್ಲ. ಯಾಕೆಂದರೆ ಅವರು ಬಂಧಿಸುವ ವ್ಯಕ್ತಿಗಳು, ನಡೆದ ವಿಧ್ವಂಸಕ ಕೃತ್ಯಗಳಿಗೂ ತಾಳಮೇಳ ಸಂಬಂಧವೇ ಇರುವುದಿಲ್ಲ. ದೆಹಲಿ ಸ್ಪೋಟದ ಬೆನ್ನಲ್ಲೇ ರಾಜ್ಯದ ನಾನಾಕಡೆ `ಉಗ್ರ'ರನ್ನು ಬಂಧಿಸಲಾಗಿದೆ. ಬಿಜಾಪುರ, ಮಣಿಪಾಲ, ಮಂಗಳೂರು, ಚಿಕ್ಕಮಗಳೂರಿನ ಕೊಪ್ಪ ಹೀಗೆ ಎಲ್ಲಾ ಕಡೆ ದೆಹಲಿ, ಉತ್ತರಪ್ರದೇಶ, ಮುಂಬೈ ಹಾಗೂ ಕರ್ನಾಟಕ ಪೊಲೀಸರ ಕಾರ್ಯಾಚರಣೆಯಲ್ಲಿ ಸಾಕಷ್ಟು ಬಂಧನಗಳಾಗಿವೆ. ಹೀಗೆ ಮೇಲಿಂದ ಮೇಲೆ ಬಂಧನ, ಸಾಕಷ್ಟು ವಿಧ್ವಂಸಕ ವಸ್ತುಗಳ ವಶವಾಗುತ್ತಿದ್ದರೂ ಮತ್ತೆ ಸ್ಟೋಟಗಳು ಮರುಕಳಿಸುತ್ತಿವೆ.
ಹಾಗಾದರೆ ಬಂಧಿಸಲ್ಪಟ್ಟವರು ಯಾರೆಂಬುದು ಪ್ರಶ್ನೆಯಾಗಿದೆ. ಮಾಸ್ಟರ್‌ ಮೈಂಡ್‌ಗಳು, ಸಿಮಿ, ಮುಜಾಹಿದಿನ್‌ ರೂವಾರಿಗಳು ಪೊಲೀಸರ ವಶವಾಗುತ್ತಿದ್ದರೂ ಸ್ಪೋಟಗಳು ಯಾಕೆ ನಿಲ್ಲಿತ್ತಿಲ್ಲ? ಮೇಲ್ನೋಟಕ್ಕೆ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸುತ್ತಿಲ್ಲವೆಂಬುದನ್ನು ಇದು ಹೇಳುತ್ತಿದೆಯೇ?
ಪೂರ್ವಗ್ರಹ?
ಒಂದು ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಕಳುವು, ಅತ್ಯಾಚಾರ, ದರೋಡೆ, ಕೊಲೆ ನಡೆದರೆ ಇಂತಹವರೇ ನಡೆಸಿದ್ದಾರೆಂಬ ಶಂಕೆ ಪೊಲೀಸರಿಗೆ ಇರುತ್ತದೆ. ಚುನಾವಣೆ, ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ `ರೌಡಿ ಎಲಿಮೆಂಟ್ಸ್‌'ಗಳನ್ನು ಪೂರ್ವಭಾವಿಯಾಗಿ ಬಂಧಿಸಲಾಗುತ್ತದೆ. ಇದು ಪೊಲೀಸರ ಮಾಮೂಲು ಕ್ರಮ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲೂ ಇಂತಹದೇ ಪ್ರಕರಣಗಳು ಮರುಕಳಿಸುತ್ತಿವೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.
ಸೆ.22 ರಂದು ದೆಹಲಿಯ ಜಾಮಿಯಾ ನಗರದಲ್ಲಿ ನಡೆದ `ಉಗ್ರರ ಹತ್ಯೆ- ಪೊಲೀಸ್‌ ಹೀರೋ ಮೋಹನ್‌ ಚಂದ್‌ಶರ್ಮ' ಪ್ರಕರಣದ ಪೋಸ್ಟ್‌ ಮಾರ್ಟಂ ವರದಿಗಳು ಇದನ್ನೇ ಬಹಿರಂಗ ಪಡಿಸಿವೆ.
ಈ ಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಅತಿಫ್‌ ಅಮೀನ್‌ ಹಾಗೂ ಸಾಜಿದ್‌ ಕುಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಅವರು ನಿರಪರಾಧಿಗಳು ಇರಬೇಕೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು `ದ ಟೆಲಿಗ್ರಾಫ್‌' ಪತ್ರಿಕೆಯ ಅಂಕಣಕಾರ ಮುಕುಲ್‌ ಕೇಶವನ್‌ ಅ.2 ರ ತಮ್ಮ ಬರಹದಲ್ಲಿ ವಿಶದವಾಗಿ ಹೇಳಿದ್ದಾರೆ. ವಿಶ್ವದ ಅತ್ಯಂತ ಹೆಮ್ಮೆಯ ಪ್ರಜಾತಾಂತ್ರಿಕ ಗಣರಾಜ್ಯವು ಬಹುಮತೀಯರ ಪ್ರಭುತ್ವವಾಗಿ ಬದಲಾಗುತ್ತಿರುವುದರ ಸಂಕೇತ ಇದಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣ ಕುರಿತು ಮಲೆಯಾಳಂ ಪತ್ರಿಕೆಯೊಂದರಲ್ಲಿ ವಿಶ್ಲೇಷಣೆ ಮಾಡಿರುವ ಸದಾನಂದ ಮೆನನ್‌ ಕೂಡ, ಈ ಘಟನೆ ನಂತರ ಬಂಧಿಸಲ್ಪಟ್ಟ ಮೂವರನ್ನು ಪಾಲೇಸ್ತೈನ್‌ ಉಗ್ರರ ಮಾದರಿಯಲ್ಲಿ ಮುಸುಕು ಹಾಕಿ ಮಾಧ್ಯಮಗಳ ಮುಂದೆ ಪ್ರದರ್ಶಿಸಿರುವುದರ ಉದ್ದಿಶ್ಯವನ್ನು ಪ್ರಶ್ನಿಸುತ್ತಾ, ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆಂಬುದನ್ನು ಒತ್ತಿ ಹೇಳಲು ಈ ರೀತಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಮರಸಿಂಗ್‌ ಈ ಜಾಮಿಯಾನಗರ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಕಾನೂನು ರೀತ್ಯ ಹೋರಾಟಕ್ಕೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‌ ಸಚಿವರಾದ ಕಪಿಲ್‌ ಸಿಬ್ಬಲ್‌, ದಿಗ್ವಿಜ್‌ಸಿಂಗ್‌, ಸಲ್ಮಾನ್‌ಖುರ್ಷಿದ್‌ ಕೂಡ ಆರಂಭದಲ್ಲಿ ಈ ಪ್ರಕರಣ ಕುರಿತು ಆಕ್ಷೇಪವೆತ್ತಿದ್ದರು.
ಯಾವುದು ಭಯೋತ್ಪಾದನೆ?
ನೆಮ್ಮದಿಯಿಂದ, ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಮಾಜ ಅಥವಾ ಸಮುದಾಯವನ್ನು ಭಯಕ್ಕೆ ದೂಡುವುದೆಲ್ಲವೂ ಭಯೋತ್ಪಾದನೆಯೇ. ಆದರೆ ಬಾಂಬ್‌ಸ್ಪೋಟದಂತಹ ವಿದ್ರೋಹದ ಚಟುವಟಿಕೆಗಳು ಮಾತ್ರ ಭಯೋತ್ಪಾದನೆ ಎಂಬ ವ್ಯಾಖ್ಯೆ ಪಡೆಯುತ್ತಿರುವುದು ಸಲ್ಲದ ಸಂಗತಿ.
ಗುಜರಾತ್‌ನಲ್ಲಿ ತಿಂಗಳುಗಟ್ಟಲೇ ನಡೆದ ಗಲಭೆ, ಕರ್ನಾಟಕದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ನಡೆದ ದಾಳಿ ಎಲ್ಲವೂ ಭಯೋತ್ಪಾದಕ ಕೃತ್ಯಗಳೆಂದು ನಾವ್ಯಾಕೆ ಕರೆಯುವುದಿಲ್ಲ. ಬಾಂಬ್‌ಸ್ಪೋಟದ ಕೃತ್ಯಗಳೆಂತೆಯೇ ಇವು ಕೂಡ ಹಿಂಸೆಯ ವೈಭವೀಕರಣವಲ್ಲವೇ?
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸಿಪಿ ಎಂ ಪಾಲಿಟ್‌ಬ್ಯುರೋ ಸದಸ್ಯೆ ೃಂದಾ ಕಾರಟ್‌, ಮಹಾರಾಷ್ಟ್ರ ನಾಂದೇಡ್‌, ಥಾನೆ, ತಮಿಳು ನಾಡಿನ ತೇನ್‌ಕಾಶಿಯಲ್ಲಿ ವಿಶ್ವಹಿಂದೂ ಪರಿಷತ್‌, ಆರೆಸ್ಸೆಸ್‌ ಹಾಗೂ ಬಿಜೆಪಿ ಮುಖಂಡರ ಮನೆಯಲ್ಲಿ ಬಾಂಬ್‌ ತಯಾರಿಕೆ ನಡೆಯುತ್ತಿದ್ದುದು, ಆಕಸ್ಮಿಕ ಸ್ಪೋಟ ಸಂಭವಿಸಿದ್ದರ ಬಗ್ಗೆ ಮಾತನಾಡಿದ್ದಾರೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ 2006ರಲ್ಲಿ ನಾಂದೇಡ್‌ನಲ್ಲಿ ನಡೆದ ಬಾಂಬ್‌ಸ್ಪೋಟಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದಾಗ ಮಹಾರಾಷ್ಟ್ರದಾದ್ಯಂತ ಕೋಮುಗಲಭೆ ಹುಟ್ಟುಹಾಕಲು ಸಂಚು ಬಯಲಿಗೆ ಬಂದಿತ್ತೆಂದು ಇತ್ತೀಚಿನ ಔಟ್‌ಲುಕ್‌ ಸಂಚಿಕೆ ವಿಸ್ತೃತ ವರದಿ ನೀಡಿದೆ.
ಶಿವಸೇನೆ ಆತ್ಮಹತ್ಯಾದಳ ರಚಿಸಲು ಮುಂದಾಗಿದ್ದರೆ, ಶ್ರೀರಾಮಸೇನೆ ಕೂಡ ಆತ್ಮಹತ್ಯಾದಳ ರಚಿಸುವುದಾಗಿ ಘೋಷಿಸಿದೆ. ಭಯೋತ್ಪಾದನೆ ವಿರೋಧಿಸುವುದಾಗಿ ಹೇಳುತ್ತಿರುವ ಸಂಘಟನೆಗಳು ಆತ್ಮಹತ್ಯಾದಳಗಳನ್ನು ಸಂಘಟಿಸಿ, ವಿಸ್ಪೋಟಕ ಕೃತ್ಯಗಳಿಗೆ ಕೈಯಿಕ್ಕಿದರೆ ಪ್ರಜಾಪ್ರಭುತ್ವಕ್ಕೆ ಎಲ್ಲಿ ಬೆಲೆ ಬಂದೀತು?
ಭಯೋತ್ಪಾದನೆಯನ್ನು ಅದು ಮುಸ್ಲಿಮರೇ ಮಾಡಲಿ, ಹಿಂದುಗಳೇ ಮಾಡಲಿ, ಸಿಖ್ಖರೇ ಮಾಡಲಿ, ಅಸ್ಸಾಮಿಯರೇ ಮಾಡಲಿ, ತಮಿಳರೇ ಮಾಡಲಿ ಅದು ಅಕ್ಷಮ್ಯ. ಯಾರೂ ಯಾರಿಗೂ ಪ್ರತಿಸ್ಪರ್ಧಿಯಾಗಿ ಅದನ್ನು ಮಾಡಕೂಡದು.
ಅಹಿಂಸಾ ಪರಮೋ ಧರ್ಮ ಎಂದು ಪ್ರತಿಪಾದಿಸಿದ, ದಯವೇ ಧರ್ಮದ ಮೂಲವಯ್ಯಾ ದಯೆಯಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರತಿಪಾದಿಸಿದ ಭಾರತೀಯರ ಸಂಸ್ಕೃತಿ ಹಾಗೆ ಉಳಿಯಬೇಕಾದರೆ ಎಲ್ಲರೂ ಹಿಂಸೆಯನ್ನು ಖಂಡಿಸಬೇಕು. ಹಿಂಸಾ ಪ್ರತಿಪಾದಕರ ವಿರುದ್ಧ ಒಂದಾಗಬೇಕು. ಬುದ್ದ, ಮಹಾವೀರ, ಗಾಂಧಿ ನೆಲೆಸಿದ ನಾಡಿನಲ್ಲಿ ಹಿಂಸೆಯ ತಾಂಡವನೃತ್ಯಕ್ಕೆ ಧ್ವನಿ ಸೇರಿಸಿದರೆ ಅನಾಗರಿಕ ಕಾಲಕ್ಕೆ, ಶಿಲಾಯುಗದ ಕಾಲಕ್ಕೆ ಮತ್ತೆ ಹೋಗುವುದರಲ್ಲಿ ಸಂಶಯವಿಲ್ಲ.
ಶಿಲಾಯುಗದ ಕಾಲದ ಜನ, ಒಳ್ಳೆಯ ಬೇಲಿಗಳು ಒಳ್ಳೆಯ ನೆರೆ ಹೊರೆಯವರನ್ನು ಸೃಷ್ಟಿಸುತ್ತವೆ ಎಂದು ನಂಬಿದ್ದರು ಎಂದು ರಾಬಟ್‌ಫ್ರಾಸ್ಟ್‌ ತನ್ನ ಪದ್ಯದಲ್ಲಿ ಹೇಳುತ್ತಾನೆ. ಅದು ಮತ್ತೆ ಮರುಕಳಿಸಬಾರದಲ್ಲವೇ?
`ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಂತು ಆಸರೆ ಪಡೆಯುವವರು ಅದು ಯಾವ ಜಾತಿಯ ಮರ, ತನ್ನ ಬಗಲಲ್ಲಿ ನಿಂತವರು ಯಾವ ಜಾತಿ, ಯಾವಧರ್ಮದವರು ಎಂದು ನೋಡುವುದಿಲ್ಲ. ಭಾರತವೆಂಬ ಮರವನ್ನು ಆಶ್ರಯಿಸುವವರು ಕೂಡ ಹೀಗೆ ಮಳೆಯಿಂದ ಆಸರೆ ಪಡೆಯಲು ನಿಂತವರೆಂಬುದನ್ನು ಮರೆಯಬಾರದು.