Sunday, November 16, 2008

ಉಗ್ರತೆ-ವಿಕಾರತೆ

ಮುಸ್ಲಿಂ ಉಗ್ರರ ಬಗ್ಗೆ ಭೂಮ್ಯಾಕಾಶ ಬಿರಿಯುವಂತೆ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯ ಬಾಯಿ ಬಂದಾಗಿದೆ. ಬಿಜೆಪಿ ಪರಿವಾರದ ಆರೆಸ್ಸೆಸ್‌, ಸಂಘಪರಿವಾರ, ಎಬಿವಿಪಿ ಕಾರ್ಯಕರ್ತರು ಬಾಂಬ್‌ಸ್ಪೋಟದಂತಹ ವಿಧ್ವಂಸಕ ಕೃತ್ಯಗಳಲ್ಲಿ ಮೇಲಿಂದ ಮೇಲೆ ಬಂಧಿತರಾಗುತ್ತಿರುವುದು ಉಗ್ರತೆಯ ಹಲವು ಮುಖಗಳನ್ನು ಬಯಲುಗೊಳಿಸಿದೆ.
ದೇಶದ್ರೋಹಿಗಳಾದ ಮುಸ್ಲಿಮ್‌ ಉಗ್ರರು ಪ್ರಮುಖ ನಗರಗಳಲ್ಲಿ ಬಾಂಬ್‌ಸ್ಪೋಟಿಸುವ ಮೂಲಕ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ದೇಶದ ಸೌಹಾರ್ದತೆ, ಶಾಂತಿ, ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಕೋಮುಗಲಭೆಗೆ ಕಾರಣರಾಗುತ್ತಿದ್ದಾರೆಂದು ಬಿಜೆಪಿ ಬೊಬ್ಬಿರಿಯುತ್ತಿತ್ತು. ಇವರನ್ನು ನಿಯಂತ್ರಿಸದ ಕೇಂದ್ರ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಡ್ವಾಣಿ, ರಾಜನಾಥಸಿಂಗ್‌, ವೆಂಕಯ್ಯನಾಯ್ಡು ಎಲ್ಲರೂ ಹೇಳುತ್ತಿದ್ದರು. ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ಈಗ ಆರು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಇದನ್ನೇ ಅಸ್ತ್ರವಾಗಿಸಲು ಬಿಜೆಪಿ ಹೊಂಚು ಹಾಕಿತ್ತು.
ಆದರೆ ಈಗ ಎಲ್ಲರ ಮುಖವಾಡವೂ ಬಯಲಾಗಿದೆ. ಮುಸ್ಲಿಂ ಉಗ್ರರಷ್ಟೇ ಆರೆಸ್ಸೆಸ್‌ ಪ್ರೇರಿತ ಉಗ್ರರೂ ಸಮಬಲದಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಇತ್ತೀಚಿಗೆ ನಡೆದ ಬಂಧನ, ವಿಚಾರಣೆಗಳು ಬಹಿರಂಗಗೊಳಿಸಿವೆ.
ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಮಸೀದಿ ಬಳಿ 2006ರಲ್ಲಿ ನಡೆದ ಸ್ಪೋಟದಲ್ಲಿ 38 ಜನ ಸಾವುಕಂಡಿದ್ದರು. ಅದರ ಜಾಡು ಹಿಡಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳದ ಸಿಬ್ಬಂದಿ ಮೊದಲು ಸಾಧ್ವಿ ಪ್ರಗ್ಯಾಳನ್ನು ಬಂಧಿಸಿದರು. ಅದರ ಬೆನ್ನಲ್ಲೆ ಕರ್ನಲ್‌ ಶ್ರೀಕಾಂತ್‌ ಪುರೋಹಿತ್‌ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯನ್ನು ಬಂಧಿಸಲಾಗಿದೆ. ಈ ಸಂಬಂಧ 25ಕ್ಕೂ ಹೆಚ್ಚು ಬಂಧನಗಳು ನಡೆದಿವೆ.
ಮಾಲೇಗಾಂವ್‌ನಲ್ಲಿ ಬಾಂಬ್‌ಸ್ಪೋಟಿಸಿ ಕೋಮುಗಲಭೆ ಹುಟ್ಟು ಹಾಕುವುದು ಇವರ ಆಶಯವಾಗಿತ್ತೆಂದು ಪ್ರಾಥಮಿಕ ತನಿಖೆ ಹೇಳಿದೆ. ಅಲ್ಲಿಗೆ ಮುಸ್ಲಿಮ್‌ ಉಗ್ರರು ಮಾಡುತ್ತಿದ್ದ ದೇಶದ್ರೋಹಿ ಕೃತ್ಯದಲ್ಲಿ ತಾನು ಭಾಗಿಯೆಂದು ಸಂಘಪರಿವಾರ ತೋರಿಸಿಕೊಟ್ಟಿದೆ. ಇದರ ಜತೆಗೆ ನಾಂದೇಡ್‌ನಲ್ಲಿ ಬಾಂಬ್‌ ತಯಾರಿಸುವಾಗ ಆರೆಸ್ಸೆಸ್‌ ಕಾರ್ಯಕರ್ತ ಸಾವನ್ನಪ್ಪಿದ್ದು ಬಯಲಾಗಿದೆ. ಹಾಗೆಯೇ ತಮಿಳುನಾಡಿನ ತಲಚೇರಿಯಲ್ಲಿ ಪ್ರದೀಪ, ದಿಲೀಪ ಎಂಬ ಆರೆಸ್ಸೆಸ್‌ ಕಾರ್ಯಕರ್ತರು ಕಳೆದವಾರವಷ್ಟೇ ಬಾಂಬ್‌ ತಯಾರಿಕೆಯಲ್ಲಿ ನಿರತರಾಗಿರುವಾಗ ಸಾವು ಕಂಡಿದ್ದಾರೆ.
ಮುಸ್ಲಿಮ್‌ ಉಗ್ರರು, ನಕ್ಸಲೀಯರು ಬಾಂಬ್‌ ತಯಾರಿಸಿ, ಸ್ಪೋಟಿಸುತ್ತಾರೆಂದು ಆಪಾದನೆಗಳ ಸುರಿಮಳೆಗೈಯುತ್ತಿದ್ದ ಬಿಜೆಪಿ ಈಗ ಯಾವ ರೀತಿ ಇದಕ್ಕೆ ಪ್ರತಿಕ್ರಿಯಿಸುತ್ತದೆ. ಇವರ್ಯಾರು ತಮಗೆ ಸಂಬಂಧಪಟ್ಟವರಲ್ಲ, ತಮ್ಮ ಸಂಘಟನೆಗೂ ಈ ಘಟನೆಗಳಿಗೂ ಸಂಬಂಧವಿಲ್ಲವೆಂದು ರಾಜನಾಥ್‌ಸಿಂಗ್‌ ಹೇಳಿದ್ದಾರೆ. ವಿವಿಧ ಸಂಘಪರಿವಾರದ ನಾಯಕರು ಇದನ್ನೇ ಪ್ರತಿಪಾದಿಸಿದ್ದಾರೆ.
ಆದರೆ ಸಾದ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಎಬಿವಿಪಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾಕೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ, ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ರಾಜನಾಥ್‌ಸಿಂಗ್‌, ನರೇಂದ್ರಮೋದಿ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡವಳು. ಮುಸ್ಲಿಮರ ಬಗ್ಗೆ ಭಾಷಣ ಬಿಗಿದು ಭರ್ಜರಿ ಚಪ್ಪಾಳೆ ಗಿಟ್ಟಿಸಿದವಳು. ಇದನ್ನೆಲ್ಲಾ ಸಿ ಎನ್‌ ಎನ್‌ ಐಬಿ ಎನ್‌ ಟಿ.ವಿ. ದಾಖಲೆ ಸಹಿತ ಪ್ರದರ್ಶಿಸಿದೆ.
ದೆಹಲಿಯ ಜಾಮಿಯಾ ಮಿಲಿಯಾ ವಿ.ವಿ.ಯ ವಿದ್ಯಾರ್ಥಿಗಳನ್ನು ಅನವಶ್ಯಕವಾಗಿ ಭಯೋತ್ಪಾದಕರೆಂದು ಬಣ್ಣಿಸಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವ( ಅವರು ಮುಸ್ಲಿಮರೆಂಬ ಏಕೈಕ ಕಾರಣಕ್ಕೆ) ಬಿಜೆಪಿ ಪ್ರಗ್ಯಾ ಬಗ್ಗೆ ಏನು ಹೇಳುತ್ತದೆ. ತಲಚೇರಿ, ನಾಂದೇಡ್‌ ಪ್ರಕರಣಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ.
ಈ ಘಟನೆಯ ಹಿಂದೆ ಸಾವರ್ಕರ್‌ ಸೊಸೆ ಹಿಮಾಂಶು ಸಾವರ್ಕರ್‌ ಸ್ಥಾಪಿತ ಅಭಿನವ ಭಾರತ ಇರುವುದು ಪತ್ತೆಯಾಗಿದೆ. ಸೇನೆಯಲ್ಲಿದ್ದ ಕರ್ನಲ್‌ ಶ್ರೀಕಾಂತ್‌ ಪುರೋಹಿತ್‌, ಅಭಿನವ ಭಾರತದ ಸಭೆಗಳಲ್ಲಿ ಪಾಲ್ಗೊಂಡು ಬಜರಂಗದಳ, ಆರೆಸ್ಸೆಸ್‌ ಕಾರ್ಯಕರ್ತರಿಗೆ ಉಪನ್ಯಾಸ ನೀಡುತ್ತಿದ್ದನೆಂಬುದು ಬಯಲಾಗಿದೆ. ಆತನ ಲ್ಯಾಪ್‌ಟಾಪ್‌ ಕೂಡ ಪೊಲೀಸರ ವಶವಾಗಿದ್ದು, ಮಾಲೇಗಾಂವ್‌ ಸ್ಪೋಟದ ರೂವಾರಿ ಈತ ಎಂಬುದು ಈಗ ಮೇಲ್ನೋಟಕ್ಕೆ ಕಂಡು ಬಂದಿರುವ ಸತ್ಯ. ಗಡ್ಡಧಾರಿ ಮುಸ್ಲಿಮರು ಮಾತ್ರ ಭಯೋತ್ಪಾದಕರಲ್ಲ, ಕಾವಿ ಬಟ್ಟೆ ಧರಿಸಿ, ಸಂನ್ಯಾಸಿ ವೇಷ ಧರಿಸಿದ ಭಯೋತ್ಪಾದಕರು ಇದ್ದಾರೆಂಬುದನ್ನು ಇತ್ತೀಚಿನ ಪ್ರಕರಣಗಳು ಬಯಲು ಮಾಡಿವೆ. ಸಾಧ್ವಿ ಪ್ರಗ್ಯಾ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯರ ಬಂಧನ ಇದಕ್ಕೆ ಸಾಕ್ಷಿಯಾಗಿದೆ.
ಹಿಂದೂಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಶಾಂತಿಯುತ ಮಾರ್ಗಗಳಿಂದ ತಡೆಯಲಾಗದೆಂಬ ಹತಾಶೆಯಲ್ಲಿ ಇವರು ಭಯೋತ್ಪಾದನೆಗೆ ಇಳಿದಿದ್ದಾರೆಂದು ಕೆಲವರು ಸಮರ್ಥಿಸುತ್ತಿದ್ದಾರೆ. ಆದರೆ ಮುಸ್ಲಿಮ್‌ ಭಯೋತ್ಪಾದನೆಗೂ ಹೀಗೆ ಸಮರ್ಥನೆ ನೀಡಬಹುದು. ಬಾಬರಿ ಮಸೀದಿ, ಮುಂಬೈ ಸ್ಪೋಟ, ಗುಜರಾತ್‌ ಮಾರಣಹೋಮ ಹೀಗೆ ಸಾಲು ಸಾಲು ಹಿಂಸೆಯಿಂದ ನಲುಗಿದ ಮುಸ್ಲಿಮ್‌ ಯುವಕರು ಹತಾಶೆಯಿಂದ ಭಯೋತ್ಪಾದನೆಗೆ ಇಳಿದಿದ್ದಾರೆಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತದೆ.
ದೇಶದ್ರೋಹ:
ಆದರೆ ಯಾವುದೇ ಭಯೋತ್ಪಾದನೆಯೂ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅದೊಂದು ದೇಶದ್ರೋಹದ ಕೃತ್ಯ. ವ್ಯವಸ್ಥೆಯ ಹಿಂಸೆಯಿಲ್ಲದೇ ವ್ಯವಸ್ಥಿತವಾಗಿ ಹಿಂಸಾಕೃತ್ಯ ಆಯೋಜಿಸುವುದು, ನಡೆಸುವುದು ಅಪರಾಧ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ. ಸಂವಿಧಾನದ ಹಾಗೂ ಪ್ರಜಾತಂತ್ರದ ಆಶಯಕ್ಕೆ ಸಂಪೂರ್ಣ ವಿರೋಧ.
ಇದನ್ನು ಯಾರೇ ಮಾಡಿದರೂ ಒಕ್ಕೊರಲ ಖಂಡನೆ ಮೂಡಿ ಬರಬೇಕಾಗಿದೆ. ಮುಸ್ಲಿಮರು ಮಾಡಿದಾಗ ಒಂದು, ಹಿಂದುಗಳು ಮಾಡಿದಾಗ ಮತ್ತೊಂದೆಂಬ ಭಾವನೆಯೇ ಭಯೋತ್ಪಾದನೆ ಹಬ್ಬಲು, ಅದು ರಾಕ್ಷಸೀರೂಪದಲ್ಲಿ ಬೆಳೆಯಲು ಕಾರಣವಾಗುತ್ತದೆ. ಈಗ ದೇಶದಲ್ಲಿ ನಡೆದಿರುವುದು ಇದೆ.
ಅಹಮದಾಬಾದ್‌, ಬೆಂಗಳೂರು, ದೆಹಲಿ ಮತ್ತಿತರ ಕಡೆ ನಡೆಯವ ಭಯೋತ್ಪಾದನೆಯನ್ನು ಖಂಡಿಸುವವರು ಗುಜರಾತ್‌ನಲ್ಲಿ ನಡೆದ ನರಮೇಧ, ಇತ್ತೀಚಿಗೆ ಒರಿಸ್ಸಾದಲ್ಲಿ ನಡೆದ ಬರ್ಬರ ಹಿಂಸೆ, ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ದಾಳಿಗಳಿಗೆ ಕಾರಣ ಹುಡುಕುತ್ತಾರೆ. ಅದು ಯಾಕೆ ಆಗಿದೆ ಎಂದು ವಿವರಣೆ ನೀಡಲು ಮುಂದಾಗುತ್ತಾರೆ. ಅದು ಖಂಡನೀಯವೆಂಬ ಘೋಷಣೆ ಕೇಳುವುದಕ್ಕಿಂತ ಆಂತರ್ಯದಲ್ಲಿ ಅದರ ಸಮರ್ಥನೆಯೇ ಗಟ್ಟಿಯಾಗಿ ಪ್ರತಿಧ್ವನಿಸುತ್ತಿರುತ್ತದೆ.
ರಾಜಕಾರಣಿಗಳು ಹೋಗಲಿ, ಭೈರಪ್ಪ, ಚಿದಾನಂದಮೂರ್ತಿ, ಸುಮತೀಂದ್ರನಾಡಿಗರಂತಹ ಸೂಕ್ಷ್ಮ ಮನಸ್ಸಿನ ಸಾಹಿತಿಗಳು ಹೀಗೆ ಮಾತಾಡುವುದು ನಾಚಿಕೆಗೇಡು. ಮುತ್ಸದ್ದಿ ಎಂದು ಕರೆಸಿಕೊಂಡ, ರಾಜಕಾರಣಿಗಳಿಗೆ ನೀತಿ ಸಂಹಿತೆ ಬೋಧಿಸುವ ರಾಮಾಜೋಯಿಸ್‌ರಂತಹವರು ಇದರ ಬೆನ್ನಿಗೆ ನಿಲ್ಲುವುದು ಅಸಹ್ಯ.
ಯಾಕೆ ಭಯೋತ್ಪಾದನೆ:
ಭಯೋತ್ಪಾದನೆ ಹಿಂದೆ ಎರಡು ಕಾರಣಗಳಿವೆ. ಒಂದು ಇದೊಂದು ಮನೋವಿಕಲ್ಪ. ಉಗ್ರತೆಯಲ್ಲಿ ವಿಕಾರತೆ. ಇನ್ನೊಬ್ಬರು ಹಿಂಸೆಯಿಂದ ಒದ್ದಾಡುತ್ತಾ ಸಾಯಲೂ ಆಗದೇ ಬದುಕಲೂ ಆಗದೇ ಇರುವ ಸ್ಥಿತಿಯನ್ನು ನೋಡಿ ಸಂಭ್ರಮಿಸುವುದು ಇಂತಹವರ ದುಶ್ಚಟ. ಇದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಹಿಂಸಾಮೋಹಿಗಳು, ಹಿಂಸೆಯನ್ನು ವಿೃಂಭಿಸಿ, ಆನಂದಿಸುವ ವಿಕಾರಿಗಳು ಇವರು. ಈಗ ನಡೆಯುತ್ತಿರುವ ಎಲ್ಲಾ ರೀತಿಯ ಭಯೋತ್ಪಾದನೆಯ ಹಿಂದೆ ಇರುವುದು ಇದೆ.
ಇನ್ನೊಂದು ತಮ್ಮ ಅಧಿಕಾರ ಸ್ಥಾಪಿಸುವ ಭಯೋತ್ಪಾದನೆ. ಹಿಜ್ಬುಲ್‌ ಮುಜಾಹಿದ್ದೀನ್‌, ತಾಲಿಬಾನ್‌, ಆರೆಸ್ಸೆಸ್‌, ಬಜರಂಗದಳ, ಶಿವಸೇನೆಯ ಹಿಂಸಾ ಮಾರ್ಗಗಳು.
ಇಲ್ಲಿ ತಮ್ಮ ಅಧಿಕಾರ ಸ್ಥಾಪಿಸುವುದೇ ಭಯೋತ್ಪಾದನೆಗೆ ಕಾರಣ. ಹಿಂಸೆಯನ್ನು ಹುಟ್ಟಿಸುವ ಮೂಲಕ ಅಧಿಕಾರವನ್ನು ಹಡೆಯಬಹುದೆಂಬುದು ಇವರ ಭ್ರಮೆ. ಗುಜರಾತ್‌ನಲ್ಲಿ ನಡೆದ ಹಿಂಸೆಯ ಮೇಲೆಯೇ ಮೋದಿ ಅಧಿಕಾರ ಸ್ಥಾಪಿಸಿದರು. ಜನಾಂಗೀಯ ದ್ವೇಷದ ಅಮಲನ್ನು ಹುಟ್ಟಿಸಿ, ತಮ್ಮ ಶ್ರೇಷ್ಠತೆಯನ್ನು ಪ್ರಜ್ವಲಿಸಿ ಅಧಿಕಾರ ಸ್ಥಾಪನೆ ಇದರ ಗುರಿ. ಇತಿಹಾಸದಲ್ಲಿ ಹಿಟ್ಲರ್‌, ಮುಸಲೋನಿಯಂತ ಫ್ಯಾಸಿಸ್ಟರು ಮಾಡಿದ್ದು ಇದನ್ನೆ.
ನಕ್ಸಲೀಯರು ಹಿಂಸೆಯನ್ನು ಪ್ರತಿಪಾದಿಸುತ್ತಾರಾದರೂ ಅದು ಜನಾಂಗೀಯ, ಧರ್ಮದ ಹಿಂಸೆಯಲ್ಲ. ಅವರ ಹಿಂಸೆಗೆ ಒಂದು ಮಟ್ಟಿಗಿನ ತಾತ್ವಿಕತೆಯಿದೆ. ಪ್ರಭುತ್ವದ(ಸರ್ಕಾರ- ಭೂಮಾಲೀಕರು) ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರವಿದೆ. ಪ್ರಜಾಸತ್ತಾತ್ಮಕ, ಸರ್ವಸಮಾನತೆಯ, ಕ್ರಾಂತಿಕಾರಿ ಸಮಾಜ ಸ್ಥಾಪಿಸಲು ಮುಂದಾಗುವ ಹೋರಾಟಗಾರರನ್ನು ಸರ್ಕಾರ ಬಗ್ಗು ಬಡಿಯಲು ಮುಂದಾಗುತ್ತದೆ. ಇಂತಹ ಸರ್ಕಾರವನ್ನು ತೊಲಗಿಸಿ, ಜನರ ಸರ್ಕಾರ ಸ್ಥಾಪಿಸಲು ಸುದೀರ್ಘ ಪ್ರಜಾ ಸಮರ ಮಾಡಬೇಕು. ಆತ್ಮರಕ್ಷಣೆ ಹಾಗೂ ಜನಾಧಿಕಾರ ಸ್ಥಾಪನೆಗೆ ಅಗತ್ಯವಾದಷ್ಟು ಹಿಂಸೆ ಅಗತ್ಯ ಎಂದು ಇವರು ಹೇಳುತ್ತಾರೆ. ಬಡವರ, ದಲಿತರ, ಭೂಮಿ- ಅನ್ನವಿಲ್ಲದವರ ಪರವಾದ ಹೋರಾಟದಲ್ಲಿ ಹೊಸ ವ್ಯವಸ್ಥೆಯ ಸ್ಥಾಪನೆಯ ಅನಿವಾರ್ಯ ಹಿಂಸೆ ಎಂದು ಹೇಳುತ್ತಾರೆ. ಇವರ ಹಿಂಸೆಯ ಮಾರ್ಗವೂ ಒಪ್ಪತಕ್ಕದ್ದಾಗಲಿ, ಬೆಂಬಲಿಸ ತಕ್ಕದ್ದಾಗಲಿ ಅಲ್ಲ. ಈ ಹಿಂಸೆಯೂ ಕೂಡ ಅಧಿಕಾರ ಸ್ಥಾಪನೆಯ ಉದ್ದೇಶದಿಂದ ಹುಟ್ಟಿದ್ದೆ ಆಗಿದೆ. ಆದರೆ ಇವೆಲ್ಲವನ್ನೂ ಪ್ರತ್ಯೇಕಿಸಿ ನೋಡುವ ಅಗತ್ಯವಿದೆ. ಹಾಗೆಯೇ ಎಲ್ಲಾ ವಿಧದ ಹಿಂಸೆಯನ್ನು ಖಂಡಿಸಬೇಕಾದ ಪರಿಸ್ಥಿತಿಯೂ ಇದೆ.
ಒಟ್ಟಿನಲ್ಲಿ ಹಿಂಸೆಯೆಂಬ ಮನೋವಿಕಾರವನ್ನು ಬದಲಿಸಿ, ಶಾಂತಿ- ಸಹಬಾಳ್ವೆಯತ್ತ ಸಮಾಜವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ. ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳನ್ನು ದೂರವಿಟ್ಟು, ಶಾಂತಿ ಸಹನೆ ಸಮಾಜ ಎಲ್ಲರ ಗುರಿಯಾಗಬೇಕಿದೆ. ಎಲ್ಲಾ ಬಗೆಯ ಹಿಂಸೆಯ ಬೆಂಬಲಿಸುವವರ ಮನಃಪರಿವರ್ತನೆಯಿಂದ ಮಾತ್ರ ಇದು ಸಾಧ್ಯ.

Friday, November 14, 2008

ಬೀದಿಗೆ ಬಿತ್ತು ಕೈ

ಕೈ ಕೈ ಜೈ ಜೈ ಎಂದು ಘೋಷಣೆ ಕೂಗಿಕೊಂಡು ತಮ್ಮ ಕೈಯನ್ನು ಮೇಲೆತ್ತಿಕೊಂಡು ಹೋಗುತ್ತಿದ್ದವರು ಒಬ್ಬೊಬ್ಬರಾಗಿ `ಹಸ್ತ'ವನ್ನು ಬೀದಿಗೆ ಬಿಸಾಕಿ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ಒಳಜಗಳ, ನಾಯಕರ ಮಧ್ಯದ ಅಸಮಾಧಾನದಿಂದಾಗಿ ಮುರಿದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಅಳಿದುಳಿದಿರುವ ನಾಯಕರು ಮಹಾಚುನಾವಣೆ ನಂತರ ಬೀದಿಯಲ್ಲಿ ಜೈಜೈ ಹೇಳುತ್ತಾ ಹರ-ತಾಳ ನಡೆಸುವ ಸನ್ನಿವೇಶ ಸೃಷ್ಟಿಯಾಗಲಿದೆ.
ವಿವಿಧ ರಾಜ್ಯ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ನ ಪ್ರಮುಖರ ತಾರಾತಿಗಡಿ ಹೇಳಿಕೆ, ಮಾತಿನ ವರಸೆ ನೋಡಿ, ಕೆಂಪುಕೋಟೆ ಮೇಲೆ ಧ್ವಜ ಹಾರಿಸುವ ಕನಸಿ ಸಂಭ್ರಮದಲ್ಲಿ ಅಡ್ವಾಣಿ ಉಲ್ಲಸಿತರಾಗುತ್ತಿದ್ದಾರೆ. ಬಡಿದಾಡಿ ಕಿತ್ತುಕೊಳ್ಳಬೇಕಾದ ಪ್ರಧಾನಿ ಪಟ್ಟ ಪ್ರಯಾಸವಿಲ್ಲದೇ ಅಡ್ವಾಣಿ ತಟ್ಟೆಗೆ ಬಂದು ಬೀಳಲಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್‌ ಸೋತು ಸುಣ್ಣವಾಗಿದೆ. ಆಂತರಿಕ ಕಚ್ಚಾಟ, ಸಮರ್ಥ ನಾಯಕತ್ವದ ಕೊರತೆ, ದೂರದರ್ಶಿತ್ವವಿಲ್ಲದ ಕಾರ್ಯಕ್ರಮಗಳು, ಅಡಾತಡಿ ನಿರ್ಧಾರಗಳು ಹೀಗೆ ಸಾಲುಸಾಲು ಇಳಿಮೆಟ್ಟಿಲುಗಳ ಮೇಲೆ ನಿಂತ ಕಾಂಗ್ರೆಸ್‌ನ್ನು ಸ್ವಯಂಕೃತ ಪಾಪಕೂಪಕ್ಕೆ ತಳ್ಳಲು ವಿಶ್ವದ ಆರ್ಥಿಕ ಕುಸಿತ ಭೂತದಂತೆ ಬಂದು ನಿಂತಿದೆ. ಚುನಾವಣೆ ಮನೆಯ ಗೇಟಿಗೆ ಬಂದು ನಿಂತಿರುವ ಹೊತ್ತಿನಲ್ಲಿ ಬಿಗಡಾಯಿಸಿರುವ ಆರ್ಥಿಕ ಮಹಾಕುಸಿತ ಕಾಂಗ್ರೆಸ್‌ನ ಅಧಿಕಾರದ ಗೋರಿಗೆ ಕೊನೆ ಹಿಡಿ ಮಣ್ಣು ಹಾಕಲಿದೆ.
ಮ್ಯಾಗಿಚಳಿ:
ಡಿಸೆಂಬರ್‌ನಲ್ಲಿ ಕೊರೆಯುವ ಚಳಿ ಆರಂಭವಾಗುವ ಮೊದಲೇ ಸೋನಿಯಾಗಾಂಧಿಯವರ ಆಪ್ತಬಳಗದಲ್ಲಿ ಅತ್ಯಾಪ್ತರಾದ ಕರ್ನಾಟಕದ ಮಾರ್ಗರೆಟ್‌ ಆಳ್ವ, ಅಪಸ್ವರದಲ್ಲಿ ಬಾಯಿ ತೆರೆವ ಮೂಲಕ ಕಾಂಗ್ರೆಸ್‌ನಲ್ಲಿ ಚಳಿಯ ನಡುಕ ಹುಟ್ಟಿಸಿದ್ದಾರೆ. ಅವರ ಮಾತು ಹೈಕಮಾಂಡ್‌ ವಿರುದ್ಧವಲ್ಲದಿದ್ದರೂ ಕಾಂಗ್ರೆಸ್‌ನ ಪರಂಪರಾನುಗತ ಹೈಕಮಾಂಡ್‌ ಸಂಸ್ಕೃತಿಗೆ ವ್ಯತಿರಿಕ್ತವಾಗಿದೆ. ತಮ್ಮ ಮೊಮ್ಮಗನಿಗೆ ಸೀಟು ಸಿಗಲಿಲ್ಲವೆಂಬ ಅಸಮಾಧಾನದಲ್ಲಿ ವಿಧಾನಸಭೆ ಚುನಾವಣೆ ವೇಳೆ ನಿಷ್ಕ್ರಿಯತೆ ತೋರಿಸಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಜಾಫರ್‌ಷರೀಫ್‌ `ಮಾರ್ಗರೆಟ್‌ ಆಳ್ವ ತಮ್ಮ ಅಸಮಾಧಾನವನ್ನು ಈ ರೀತಿ ಬಹಿರಂಗವಾಗಿ ವ್ಯಕ್ತಪಡಿಸಬಾರದಿತ್ತು. ಪಕ್ಷದ ವಲಯದಲ್ಲಿ ಅದನ್ನು ಚರ್ಚಿಸಬಹುದಿತ್ತೆಂದು' ಹೇಳಿರುವುದನ್ನ ಈ ಹಿನ್ನೆಲೆಯಲ್ಲಿ ನೋಡಬೇಕು.
ಸೋನಿಯಾರ `ಥಿಂಕ್‌ಟ್ಯಾಂಕ್‌' ಬಳಗದ ಸದಸ್ಯೆ ಮಾರ್ಗರೆಟ್‌ ಆಳ್ವ ಬಹಿರಂಗವಾಗಿ ಕಾಂಗ್ರೆಸ್‌ ವಿರುದ್ಧ ಮಾತಾಡುವ ಮೂಲಕ ಕಾಂಗ್ರೆಸ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಅದರಿಂದ ಮ್ಯಾಗಿ ಎಷ್ಟು ಕಳೆದುಕೊಂಡಿದ್ದಾರೆಂಬುದಕ್ಕಿಂತ ಕಾಂಗ್ರೆಸ್‌ ಎಷ್ಟು ಕಳೆದುಕೊಳ್ಳಲಿದೆ ಎಂಬುದು ಮುಖ್ಯ.
ಅವರ ಆಪಾದನೆ ಮುಖ್ಯವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಮಾರಿಕೊಳ್ಳಲಾಗಿದೆ ಎಂಬುದಾಗಿತ್ತು. ಅವರು ಬಹಿರಂಗಪಡಿಸಿರುವುದು ರಹಸ್ಯವೇನಲ್ಲ. ರಾಜ್ಯದ ಹಿರಿ-ಕಿರಿಯ ನಾಯಕರು ಚುನಾವಣೆ ಫಲಿತಾಂಶದ ನಂತರ ಅಂತರಂಗ-ಬಹಿರಂಗವಾಗಿ ಈ ರೀತಿ ಅರ್ಥ ಬರುವ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ ಸೋತ ಹತಾಶೆಯ ಹಿನ್ನೆಲೆಯಲ್ಲಿ ಈ ರೀತಿಯ ಅಭಿಪ್ರಾಯಗಳಿಗೆ ಆಗ ಮನ್ನಣೆ ಬರಲಿಲ್ಲ.
ಆಗಲೇ ಹೈಕಮಾಂಡ್‌ ಎಚ್ಚೆತ್ತಿದ್ದರೆ ಈಗಿನಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ಸೋಲಿಗೆ ಕಾರಣರಾದ ಆಗಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನಂತಹ ಆಯಕಟ್ಟಿನ ಸ್ಥಾನ ನೀಡಿದ್ದು, ಸಿದ್ದರಾಮಯ್ಯ, ಎಸ್‌.ಎಂ. ಕೃಷ್ಣರಂತಹ ವರ್ಚಸ್ವಿ ನಾಯಕರನ್ನು ಕಡೆಗಣಿಸಿದ್ದು ಇವೆಲ್ಲವೂ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ಕ್ರಮವಾಗಿದ್ದವು. ಮೈಸೂರು ಹಾಗೂ ರಾಜ್ಯದ ಇತರ ಭಾಗದಲ್ಲಿ ಕನಿಷ್ಠ 15 ಸೀಟು ತರಲು ಕಾರಣರಾಗಿದ್ದ ಸಿದ್ದುಗೆ ಕೈಕೊಟ್ಟಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಇಟ್ಟ ಮೊದಲ ತಪ್ಪು ಹೆಜ್ಜೆ.
ಇದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಸೋಲು ಕಂಡಿದ್ದ ಆರ್‌.ವಿ. ದೇಶಪಾಂಡೆಗೆ ಕೆಪಿಸಿಸಿ ಪಟ್ಟ ಕಟ್ಟಿದ್ದು ಮತ್ತೊಂದು ತಪ್ಪು ನಡೆ. ಹೇಳಿಕೇಳಿ ಯಾವುದೇ ಮತಬ್ಯಾಂಕ್‌ನ ಪ್ರಬಲ ಹಿನ್ನೆಲೆಯಿಲ್ಲದ ದೇಶಪಾಂಡೆಗೆ ಅಧಿಕಾರ ವಹಿಸಿಕೊಡುವ ಮೂಲಕವೇ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ನ ಅನಭಿಷಕ್ತ ರಾಣಿಯಂತಿದ್ದ ಮಾರ್ಗರೆಟ್‌ ಆಳ್ವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಇರುಸು ಮುರುಸು ಉಂಟು ಮಾಡಿತ್ತು. ಜತೆಗೆ ಬೆಂಗಳೂರಿನ ಸರ್ವಜ್ಞನಗರದಲ್ಲಿ ಆಳ್ವ ಪುತ್ರ ನಿವೇದಿತ್‌ ಆಳ್ವಗೆ ಟಿಕೆಟ್‌ ಕೊಡದೇ, ಕೆ.ಜೆ. ಜಾರ್ಜ್‌ಗೆ ಟಿಕೆಟ್‌ ನೀಡಿದ್ದು, ಮ್ಯಾಗಿ ಸಿಟ್ಟಿಗೆ ಕಾರಣವಾಗಿತ್ತು. ಇವರೆಡರ ಸಿಟ್ಟನ್ನು ಮ್ಯಾಗಿ ಒಮ್ಮಿಂದೊಮ್ಮೆಗೆ ಹೊರ ಹಾಕಿದ್ದೇ ಹೈಕಮಾಂಡ್‌ನ ಅವಕೃಪೆಗೆ ಕಾರಣವಾಗಬೇಕಾಯಿತು.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಮಾರಾಟ ಕಾಂಗ್ರೆಸ್‌ನಲ್ಲಿ ಮಾತ್ರ ನಡೆದಿಲ್ಲ. ಬಿಜೆಪಿಯಲ್ಲಿ ಕೂಡ ಅದೇ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಅನಂತಕುಮಾರ್‌, ಆರ್‌. ಅಶೋಕ್‌, ಯಡಿಯೂರಪ್ಪ ಎಲ್ಲರೂ ಸವ್ವಾಸೇರಿಗೆ ಬಿದ್ದವರಂತೆ ವ್ಯಾಪಾರ ಕುದುರಿಸಿದವರೆ. ವ್ಯಾಪಾರದ ಕಾರಣಕ್ಕೆ ದೆಹಲಿಯಲ್ಲಿ ನಡೆದ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಯಡ್ಡಿ-ಅನಂತ್‌ ಮಧ್ಯೆ ತಾರಾಮಾರಿಯೇ ನಡೆದಿತ್ತು. ನೀನು-ತಾನು ಎಂಬ ಮಾತುಗಳನ್ನು ಆಡಿಕೊಂಡಿದ್ದರು. ಜೆಡಿ ಎಸ್‌ನ `ದ್ರೋಹ'ದ ಅಲೆಯಲ್ಲಿ ಕಮಲ ಅರಳಿತ್ತು. ಈಗ ಟಿಕೆಟ್‌ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಮಾರಾಟವಾದ ಬಗ್ಗೆ ಗಟ್ಟಿಯಾಗಿ ಗಂಟಲು ಹರಿದುಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಮಾನ್‌ ಡಿ.ವಿ. ಸದಾನಂದಗೌಡರು, ಬಿಜೆಪಿಯ ಬಿ ಫಾರಂನ್ನು ತಾವೇ ನಿರ್ಧರಿಸಿ ಕೊಟ್ಟಿದ್ದರೆ ಎಂದು ಅವರೇ ನಂಬುವ ದೇವರೆದುರು ಪ್ರಮಾಣ ಮಾಡಿ ಹೇಳಲು ತಯಾರಿದ್ದಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಲಾರರು.
ಕಾಂಗ್ರೆಸ್‌ನವರು ತಮ್ಮ ಪಕ್ಷದವರಿಗೆ ಟಿಕೆಟ್‌ ಮಾರಿಕೊಂಡರು. ಆದರೆ ಬಿಜೆಪಿ ಬೇರೆ ಪಕ್ಷದ ಚಿಹ್ನೆಯಡಿ ಜನರೇ ಆರಿಸಿ ಕಳಿಸಿದ್ದ ಶಾಸಕರನ್ನೇ ಖರೀದಿ ಮಾಡುವ ಮೂಲಕ ಮಾಡಿದ್ದು ಇನ್ನೇನು? ಬಿಜೆಪಿಯವರು ಶಾಸಕರನ್ನು ದುಡ್ಡುಕೊಟ್ಟು, ಮಂತ್ರಿಗಿರಿ ಆಸೆ ತೋರಿಸಿ ಖರೀದಿಸಿರುವಾಗ ಕಾಂಗ್ರೆಸ್‌ನ್ನು ಟೀಕಿಸಲು ನೈತಿಕ ಹಕ್ಕು ಎಲ್ಲಿದೆ ಸದಾನಂದಗೌಡರೆ? ರಾಜಸ್ತಾನದಲ್ಲೂ ಬಿಜೆಪಿ ಟಿಕೆಟ್‌ ಮಾರಾಟವಾಗಿದೆ ಎಂಬ ಆಪಾದನೆ ಬಗ್ಗೆ ಗೌಡರು ಏನು ಹೇಳುತ್ತಾರೆ?
ಚಳಿ ಪರಿಣಾಮ:
ಮ್ಯಾಗಿ ಹುಟ್ಟಿಸಿದ ಚಳಿಗೆ ಕಾಂಗ್ರೆಸ್‌ನಲ್ಲಿ ಉಡುರು ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದ ಸಂಸದ ಆರ್‌.ಎಲ್‌. ಜಾಲಪ್ಪ, ಆಳ್ವ ಹೇಳಿದ್ದು ಸತ್ಯವೆಂದು ಪ್ರಮಾಣೀಕರಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅವರ ಮಗ ಜೆ. ನರಸಿಂಹಸ್ವಾಮಿಗೆ ಟಿಕೆಟ್‌ ನೀಡಿ, ಕಾಂಗ್ರೆಸ್‌ ಪಕ್ಷ ಗೆಲ್ಲಿಸಿತು ತಾನೆ? ಆನಂತರ ನರಸಿಂಹಸ್ವಾಮಿ `ಕೊಳಚೆ ನಿರ್ಮೂಲನಾ ಮಂಡಳಿ' ಆಸೆಗೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದು ಯಾಕೆ? ಜಾಲಪ್ಪ ಆ ಚುನಾವಣೆಯಲ್ಲಿ ತಮ್ಮ ಮಗನಿಗೆ ಬೆಂಬಲ ನೀಡದೇ ಇದ್ದರೆ ನರಸಿಂಹಸ್ವಾಮಿ ಆಯ್ಕೆಯಾಗುತ್ತಿದ್ದರೆ? ಈ ಪ್ರಶ್ನೆಯನ್ನು ಜಾಲಪ್ಪ ಕೇಳಿಕೊಳ್ಳಬೇಕಿದೆ.
ಆದರೆ ಜಾಲಪ್ಪ ಹೀಗೆ ಮ್ಯಾಗಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ ಗಾಯಕ್ಕೆ ಖಾರ ಸವರಿದ್ದಾರೆ. ಜತೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅದು ಕಾಂಗ್ರೆಸ್‌ಗೆ ನಿವೃತ್ತಿಯೋ ಅಥವಾ ಬೇರೆ ಪಕ್ಷದ ಜತೆ ಮಿಲಾಕತ್‌ಗೆ ದಾರಿಯೋ ಎಂಬುದನ್ನು ಕಾಲವೇ ಹೇಳಬೇಕಿದೆ. ಹಿಂದುಳಿದ ವರ್ಗದ ಪ್ರಮುಖ ನಾಯಕರಲ್ಲೊಬ್ಬರಾದ ಜಾಲಪ್ಪ ಕಾಂಗ್ರೆಸ್‌ನಿಂದ ನಿರ್ಗಮಿಸುತ್ತಿರುವುದು ಹೇಗೆ ಲೆಕ್ಕ ಹಾಕಿದರೂ ಪಕ್ಷಕ್ಕೆ ನಷ್ಟವೇ ಎಂಬುದರಲ್ಲಿ ಎರಡು ಮಾತಿಲ್ಲ.
ಇದರ ಜತೆಗೆ ಸಿದ್ಧರಾಮಯ್ಯ ಕೂಡ ತಮ್ಮ ಧ್ವನಿ ಸೇರಿಸಿದ್ದಾರೆ. ಮ್ಯಾಗಿ ಹೇಳಿರುವುದು ಸತ್ಯ. ಹೈಕಮಾಂಡ್‌ ಈ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡಿದ್ದಾರೆ. ಜತೆಗೆ ಉಪಚುನಾವಣೆಯಲ್ಲಿ ಜೆಡಿ ಎಸ್‌ ಜತೆ ಕೈ ಜೋಡಿಸಿದ್ದೇ ಆದರೆ ತಾವು ಕೈಗೆ ಗುಡ್‌ಬೈ ಹೇಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲಿಗೆ ಅವರು ಒಂದು ಕಾಲು ಹೊರಗಿಟ್ಟಿರುವುದು ದಿಟ. ಮ್ಯಾಗಿಯ ನಡೆಯಿಂದ ಕಾಂಗ್ರೆಸ್‌ನ ಎರಡು ಕಂಬಗಳು ಅಲ್ಲಾಡುತ್ತಿವೆ.
ರಾಷ್ಟ್ರಮಟ್ಟದಲ್ಲೂ ಮ್ಯಾಗಿ ನಡೆ ಕಾಂಗ್ರೆಸ್‌ನ್ನ ಅದುರಿಸಿದೆ. ಬಿಹಾರ ಪ್ರತಿಪಕ್ಷ ನಾಯಕ ಆಲಂ ಖುರ್ಷಿದ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕ ಪಿ. ಶಿವಶಂಕರ್‌ ಕೂಡ ಮ್ಯಾಗಿಗೆ ಬೆಂಬಲವಾಗಿ ನಿಂತಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮ್ಯಾಗಿ ನೀಡಿರುವ ಆಘಾತ ಕಾಂಗ್ರೆಸ್‌ನ ಮಟ್ಟಿಗೆ ಆತ್ಮಘಾತುಕವಾದುದು. ಹಾಗೆಯೇ ಆಯಾ ರಾಜ್ಯಗಳ ಚುನಾವಣೆಗೆ ಮುನ್ನೆಚ್ಚರಿಕೆಯೂ ಹೌದು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಚಿಂತಿಸುವುದಕ್ಕೆ ಇದು ಸಕಾಲ.
ಬಿಜೆಪಿಗೆ ಅಸ್ತ್ರ:

ದೇಶದಲ್ಲಿ ನಡೆದ ಭಯೋತ್ಪಾದನಾ ವಿಧ್ವಂಸಕ ಕೃತ್ಯಗಳ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಬಿಜೆಪಿ ಮಾಲೇಗಾಂವ್‌ ಸ್ಪೋಟದ ಅಪಖ್ಯಾತಿಯಲ್ಲಿ ಮಂಕಾಗಿತ್ತು. ಭಯೋತ್ಪಾದನೆಯೆಂಬುದು ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಬೆಂಬಲಿತ ಮುಸ್ಲಿಮರ ಕೃತ್ಯವೆಂಬ ಅಸ್ತ್ರವನ್ನು ಬಳಸುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು.
ಈ ಪರಿಸ್ಥಿತಿಯಿಂದ ಬಚಾವಾಗಲು ಸಿಕ್ಕಿದ ಪ್ರಮುಖ ಅಸ್ತ್ರವೆಂದರೆ ಕಾಂಗ್ರೆಸ್‌ನ ಟಿಕೆಟ್‌ ಮಾರಾಟ. ಮಾರ್ಗರೆಟ್‌ ಆಳ್ವರ ಹೇಳಿಕೆಯಿಂದ ಸಂತುಷ್ಟಗೊಂಡವರು ಬಿಜೆಪಿ ಮುಖಂಡರು. ಈ ಸಂಭ್ರಮದಲ್ಲಿದ್ದ ಬಿಜೆಪಿ ಮಂದಿಗೆ ಇದೀಗ ರಾಜಸ್ತಾನದಲ್ಲಿ ಬಿಜೆಪಿ ಟಿಕೆಟ್‌ ಮಾರಾಟವಾಗಿದೆ ಎಂದು ಬಿಜೆಪಿ ಸಂಸದ ವಿಶ್ವೇಂದ್ರಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಹೇಳಿಕೇಳಿ ಅಲ್ಲಿನ ಮುಖ್ಯಮಂತ್ರಿ ವಸುಂಧರರಾಜೆ ಅವರ ಆಪ್ತರು. ಬಿಜೆಪಿಯಲ್ಲಿ ಬಾಂಬ್‌ ಸಿಡಿದಿದ್ದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಟಿಕೆಟ್‌ ಮಾರಾಟದ ಸಂಗತಿಯನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂದಿದ್ದ ಬಿಜೆಪಿ ಮುಖಂಡರು ಈಗ ತಲ್ಲಣಿಸಿದ್ದಾರೆ.
ಮ್ಯಾಗಿ ಮುಂದೆ?
ಬಾಯಿ ತೆರೆಯುವ ಮೂಲಕ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡ ಮಾರ್ಗರೆಟ್‌ ಆಳ್ವ ಮುಂದಿನ ಹಾದಿಯೇನು? ಎಂಬುದು ನಿಗೂಢವಾಗಿದೆ. ಬಹುಜನ ಸಮಾಜ ಪಕ್ಷ ಸೇರಲಿದ್ದಾರೆಂದು ಹೇಳಲಾಗುತ್ತಿದೆಯಾದರೂ ಆ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ಪ್ರಭಾವಿ ಹುದ್ದೆ ಹೊಂದಿದ್ದ ಆಳ್ವ, ಬಿ ಎಸ್‌ಪಿಯ ಪ್ರಶ್ನಾತೀತ ನಾಯಕಿ ಮಾಯಾವತಿಯ ಮರ್ಜಿಗೆ ತಕ್ಕಂತೆ ನಡೆಯುವುದು ಕಷ್ಟ. ಹಾಗಾಗಿ ಅವರು ಅಲ್ಲಿಗೆ ಹೋಗಲಾರರು.
ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಬೇಕೆಂಬ ಪಣತೊಟ್ಟಿರುವ ಬಿಜೆಪಿ ಯಾವ ರಾಜಕೀಯ ತಂತ್ರಗಾರಿಕೆ ಹೆಣೆಯಲಿದೆ ಎಂದು ನೋಡಬೇಕಿದೆ. ಉತ್ತರ ಕನ್ನಡದ ಸಂಸದ ಅನಂತಕುಮಾರ್‌ ಹೆಗಡೆ ಅಲ್ಲಿ ಎರಡು ಬಾರಿ ಗೆದ್ದವರು. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲವೆಂಬ ಕಾರಣಕ್ಕೆ ಅವರ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆ. ಹಲವು ಬಿಜೆಪಿ ಸಂಸದರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರೂ ಅನಂತಕುಮಾರ್‌ ಹೆಗಡೆ ನಿಷ್ಕ್ರಿಯರು. ಬಿಜೆಪಿ ನಡೆಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಇವರ ಬದಲಿಗೆ ಮಾರ್ಗರೆಟ್‌ ಆಳ್ವರನ್ನು ನಿಲ್ಲಿಸಿ, ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಹೆಚ್ಚು ಗಳಿಸಲು ಬಿಜೆಪಿ ಲೆಕ್ಕ ಹಾಕಿದರೂ ಸಂಶಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ನಡೆಯನ್ನು ನೋಡಿದ ಯಾರೂ ಇದನ್ನು ನಿರಾಕರಿಸಲಾರರು. ಸಾಂಗ್ಲಿಯಾನ, ಸುಭಾಷ್‌ಭರಣಿಯಂತವರೇ ಬಿಜೆಪಿ ಸೇರಿರುವಾಗಿ ಮಾರ್ಗರೆಟ್‌ ಆಳ್ವ ಸೇರುವುದು ಅಸಾಧ್ಯವೆಂದೇನೋ ಭಾವಿಸಬೇಕಾಗಿಲ್ಲ.

Monday, November 10, 2008

ಸ್ತ್ರೀಮತವನುತ್ತರಿಸಲಾರದೆ . . .

`ಮನೆ ಮನೆಯಲಿ ದೀಪವುರಿಸಿ, ಹೊತ್ತುಹೊತ್ತಿಗೆ ಅನ್ನವುಣಿಸಿ ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ'- ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ.
ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿ ನಡೆದು, ಸಮಾಜದ ಎಲ್ಲಾ ಸ್ತರದಲ್ಲೂ ಮಹಿಳೆ ಮುಂದೆ ಬಂದಿದ್ದರೂ ಇನ್ನೂ ಕೂಡ ಸಮಾಜದಲ್ಲಿ ಸ್ತ್ರೀಯರನ್ನು `ಸೆಕೆಂಡ್‌ ಸೆಕ್ಸ್‌' ಆಗಿಯೇ ಪರಿಗಣಿಸುವುದು ತಪ್ಪಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಮಹಿಳೆ ತೊಡಗಿಸಿಕೊಂಡಿದ್ದರೂ `ನೀನು ಅಸಮರ್ಥೆ' ಎಂದು ಉಚ್ಚರಿಸುವುದನ್ನು ಸಮಾಜ ನಿಲ್ಲಿಸಿಲ್ಲ. ಹೆಚ್ಚು ಮಾತಾಡಿದರೆ `ಬಜಾರಿ'(ನಿಜಾರ್ಥ ಬಜಾರಿ-ಮಾರ್ಕೆಟ್‌-ನಲ್ಲಿರುವವವಳು) ಎಂದು ಹೀಗಳೆಯುವುದು, ಸ್ವಲ್ಪ ಅಳುಕಿದರೆ `ಅಳುಮುಂಜಿ' ಎಂಬ ಬಿರುದು ದಯಪಾಲಿಸುವುದು ನಿರಂತರ. ವ್ಯಕ್ತಿತ್ವ ರೂಪಣೆಗೆ ಮುಂದಾಗಿ ಯಾವುದಕ್ಕೂ ಕಂಗೆಡದೆ ಮುನ್ನಡೆದರೆ ವೈಯಕ್ತಿಕ ತೇಜೋವಧೆ, ಅಕ್ರಮ ಸಂಬಂಧದ ಆರೋಪ, ಆ್ಯಸಿಡ್‌ ದಾಳಿ, ಆತ್ಯಂತಿಕವಾಗಿ ಕೊಲೆಯಂತಹ ದುಷ್ಕೃತ್ಯಗಳಿಗೆ ಆಕೆ ಬಲಿಯಾಗಬೇಕಾಗುತ್ತದೆ. ಇದು ಸಮಾಜದ ಸುಡುವಾಸ್ತವ.
ಒಟ್ಟಂದದಲ್ಲಿ ಮಹಿಳೆ ಪುರುಷನಿಗೆ ಸಮಾನಿಯೆಂದು ಒಪ್ಪುವುದು ಹೋಗಲಿ, ಭಾವಿಸಲು ಕೂಡ ಪುರುಷ ಕೇಂದ್ರೀತ ಸಮಾಜ ಸಿದ್ದವಿಲ್ಲ. ಅಪ್ಪನಿಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ, ಮಗನಿಗೆ ತಾಯಾಗಿ, ಅಣ್ಣನಿಗೆ ತಂಗಿಯಾಗಿ, ಮೇಲಾಧಿಕಾರಿಯಾಗಿ ಅಡಿಯಾಧಿಕಾರಣಿಯಾಗಿಯೇ ಆಕೆ ಇರಬೇಕೆಂಬುದು ನಿಸರ್ಗ ನಿಯಮ ಅಥವಾ ಸೂರ್ಯನ ಸುತ್ತ ಭೂಮಿ ತಿರುಗುವಷ್ಟೇ ಸಹಜವೆಂದು ಪರಿಭಾವಿಸಲಾಗಿದೆ.
ಪರಂಪರೆಯ ಕೊಡುಗೆ?
ಅಪುತ್ರಸ್ಯ ಗತಿರ್ನಾಸ್ತಿ ಎಂಬಲ್ಲಿಂದ ಹಿಡಿದು, ಪಿತಾರಕ್ಷತಿ ಕೌಮಾರೆ, ಭರ್ತ್ಯಾ ರಕ್ಷತಿ ಯೌವನೇ, ರಕ್ಷಂತಿ ಸ್ಥವಿರೇ ಪುತ್ರಾ ನಃ ಸ್ತ್ರೀ ಸ್ವಾತಂತ್ರಮರ್ಹಸಿ ಎಂಬಲ್ಲಿಯವರೆಗೆ ಪುರಾಣದಲ್ಲಿ ಸ್ತ್ರೀಯರನ್ನು `ರಕ್ಷಿಸಿ'ಕೊಂಡು ಬರಲಾಗಿದೆ. ಗೃಹಿಣಿ ಗೃಹಮುಚ್ಯತೆ(ಗೃಹಂ ಉಚ್ಚತೆ) ಎಂದು ಹೇಳುತ್ತಲೇ ಗೃಹದೊಳಗೆ ಗೃಹಿಣಿಯನ್ನು ಮುಚ್ಚಿಡಲಾಗಿದೆ. ಮೇಲೆ ಇಟ್ಟರೆ ಕಾಗೆ ಕಚ್ಚುತ್ತೆ, ಕೆಳಗೆ ಇಟ್ಟರೆ ಇರುವೆ ಕಚ್ಚುತ್ತೆ ಎಂಬಂತೆ ಆಕೆಯನ್ನು `ಸುರಕ್ಷತೆ'ಯಿಂದ ನೋಡಿಕೊಂಡು ಆಕೆಗೆ ಸೂರ್ಯ ರಶ್ಮಿ ಬೀಳದಂತೆ ಕಾಪಿಡಲಾಗಿದೆ. ಅದರ ಮೂಲಕ ಹೊರಜಗತ್ತನ್ನು ನೋಡದಂತಹ `ಬಂಧನ'ದಲ್ಲಿ ಇಡಲಾಗಿದೆ.
ಆಧುನಿಕ ಮಹಿಳೆ ಉದ್ಯೋಗ, ದುಡಿತದಲ್ಲಿ ತೊಡಗಿದ್ದರೂ ಕೂಡ ಆಕೆಗೆ ಗೃಹಬಂಧನ ತಪ್ಪಿಲ್ಲ. ಹೊರಗೆ ಮೈಮುರಿ ಕೆಲಸ, ಮನೆಯಲ್ಲಿ ಬಂದರೆ ಅಡುಗೆ, ಬಟ್ಟೆಯ ರ್ವಾತ, ಜತೆಗೆ ಮಕ್ಕಳ ಉಪದ್ವ್ಯಾಪ ಹೀಗೆ ಜೀವನವೇ ರೋಸಿಹೋಗುವಷ್ಟು ಆಕೆಯನ್ನು ಹೆಡೆಮುರಿ ಕಟ್ಟಿ ದುಡಿಮೆಗೆ ಹಚ್ಚಲಾಗಿದೆ. ಆಫೀಸು, ಮನೆ, ಮಕ್ಕಳ ಓದು-ಆರೈಕೆ ಬಿಟ್ಟರೆ ಆಕೆಗೆ ಮತ್ತೊಂದು ಪ್ರಪಂಚವೇ ಇಲ್ಲದಂತೆ ಮಾಡಲಾಗಿರುವುದು ಆಧುನಿಕತೆಯ ಕೊಡುಗೆ. ದುಡಿಯುವ, ತಿಂಗಳಾರಂಭದಲ್ಲಿ ಸಂಬಳ ಎಣಿಸುವ, ಗಂಡಸರಂತೆ ಕಚೇರಿ ವ್ಯವಹಾರ ಮಾಡುವ `ಸ್ವಾತಂತ್ರ್ಯ'ವಿದ್ದರೂ ದುಡಿದ ದುಡ್ಡು ಗಂಡನ ನಿಯಂತ್ರಣದಲ್ಲಿರುತ್ತದೆ. ಮನೆಯ ಕೆಲಸದ ಜತೆಗೆ ದುಡಿಮೆಯ ಕೆಲಸದ ಹೊರೆಯೂ ಆಕೆಯನ್ನು ಬಳಲಿ ಬೆಂಡಾಗಿಸುತ್ತಿದೆ. ಒಂದಿದ್ದ ಜವಾಬ್ದಾರಿ ಎರಡಾಗಿರುವುದಷ್ಟೇ ಮಹಿಳೆಯ ಹೆಚ್ಚುಗಾರಿಕೆಯಾಗಿದೆ. ಜತೆಗೆ ಹೋಗುವಾಗ, ಬರುವಾಗ ದಾರಿಯಲ್ಲಿನ ಕಿರುಕುಳ, ಗಂಡನ ಅನುಮಾನ, ಅತ್ತೆ, ನಾದಿನಿಯರ ಕೊಂಕುನುಡಿಯನ್ನೂ ಕೇಳಬೇಕಾಗಿದೆ. ಕೆಲವು ಕಚೇರಿಗಳಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಿರುಕುಳವೂ ಆಕೆಯನ್ನು ಬಾಧಿಸುತ್ತಿದೆ. ಕೈಗೆ ಒಂದಿಷ್ಟು ಹಣವು ಸಿಕ್ಕಿದರೂ ಕೂಡ ಇವೆಲ್ಲವೂ ಆಕೆಯ ಮೇಲೆ ಆಕ್ರಮಣ ಮಾಡುತ್ತಿದೆ.
ಪುರುಷಾಧಿಪತ್ಯದ ಠೇಂಕಾರದಲ್ಲಿ ಸಿಕ್ಕಿದ ಸ್ವಾತಂತ್ರ್ಯವೂ ನಿಯಂತ್ರಿತವಾಗಿದ್ದು, ದುಡಿಯುವ ಮಹಿಳೆಯರಲ್ಲಿ ಶೇ.50 ರಷ್ಟು ಮಂದಿ, ಮನೆ ನೋಡಿಕೊಳ್ಳುವುದಷ್ಟೇ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಭಿಪ್ರಾಯಪಡುವ ಸ್ಥಿತಿಗೆ ತಲುಪಿದ್ದಾರೆ. ರಾತ್ರಿ ಪಾಳಿ ಮಾಡುವ ಮಹಿಳೆಯರದ್ದಂತೂ ಸಂಕಷ್ಟಗಳ ಸರಮಾಲೆ.
ಈ ಎಲ್ಲದರ ಮಧ್ಯೆಯೂ ದುಡಿಯುವ ಸ್ವಾತಂತ್ರ್ಯ, ಹೊರಗಡೆ ಸ್ವಚ್ಛಂಧವಾಗಿ ಓಡಾಡಲು ಸಿಕ್ಕ ಅವಕಾಶವನ್ನು ಸಂಭ್ರಮಿಸುವವರು ಇದ್ದಾರೆ. ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಂಡು, ಸುತ್ತಲಿನ ವಾತಾವರಣವನ್ನು ಕಷ್ಟವೋ ಸುಖವೋ ಒಗ್ಗಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತ ಮಹಿಳೆಯರು ಅನುಸರಿಸಬೇಕಿದೆ. ಹಾಗಿದ್ದಾಗ ಮಾತ್ರ ಸ್ತ್ರೀಸ್ವಾತಂತ್ರ್ಯಕ್ಕೆ ಹೆಚ್ಚಿನ ಶಕ್ತಿ, ಬಲ ಬರುತ್ತದೆ. ಪುರುಷರಂತೆ ಮಹಿಳೆಯರೂ ಎಲ್ಲದರೂ ಸಮಾನರು ಎಂಬುದಕ್ಕೆ ಅರ್ಥವೂ ಬರುತ್ತದೆ.
ಪುರುಷ ಭಾಷೆ:
ಸ್ತ್ರೀ ಸ್ವಾತಂತ್ರ್ಯ ಎಂದು ಎಷ್ಟೇ ಗಟ್ಟಿ ಧ್ವನಿಯಲ್ಲಿ ಸಮಾಜ ಮಾತನಾಡಿದರೂ ನಮ್ಮ ಸಮಾಜದ ಪರಿಭಾಷೆಗಳು ಪುರುಷ ಕೇಂದ್ರಿತವಾಗಿವೆ. ಏಕೆಂದರೆ ಇತಿಹಾಸವೆಂದರೆ `ಹಿಸ್‌' ಸ್ಟೋರಿ ವಿನಃ `ಹರ್‌' ಸ್ಟೋರಿ ಆಗಿಯೇ ಇಲ್ಲ. ಆದಿಮ ಸಮಾಜದಲ್ಲಿ ಮಹಿಳೆಯೇ ಸಮಾಜದ ಯಜಮಾನ್ತಿ ಆಗಿದ್ದರೂ ನಮ್ಮ ನಿತ್ಯದ ಆಡುಭಾಷೆಯ ಪದಕೋಶಗಳಲ್ಲಿ ಮಹಿಳೆ ಕಾಣಿಸುವುದೇ ಇಲ್ಲ.
ಬೇಟೆಯಾಡಿ ತಿನ್ನುವ ಸಮಾಜದ ಉತ್ಪಾದನಾ ವ್ಯವಸ್ಥೆ ಕೃಷಿಗೆ ಹೊಂದಿಕೊಂಡು ಸಾವಿರಾರು ವರ್ಷಗಳೇ ಸವೆದು ಹೋಗಿವೆ. ಕೃಷಿ ಸಮಾಜ ಸ್ಥಾಪನೆಯಲ್ಲಿ ಪುರುಷರಷ್ಟೇ ನೇಗಿಲಿನ ನೊಗಕ್ಕೆ ಹೆಗಲುಕೊಟ್ಟವಳು ಮಹಿಳೆ. ಆದರೆ ಈಗಲೂ ಕನ್ನಡದಲ್ಲಿ `ರೈತ' ಎಂದು ಪುರುಷವಾಚಕ ಪದವನ್ನು ಬಳಸುತ್ತೇವೆಯೇ ವಿನಃ ರೈತಿ ಎಂಬ ಪದವೇ ಇಲ್ಲ. ರೈತ ಮಹಿಳೆ ಎನ್ನುತ್ತೇವೆ.
ದುಡಿವ ವರ್ಗದಲ್ಲಿ ಮಹಿಳೆಯರದೇ ಪ್ರಧಾನ ಪಾಲು. ಕಾರ್ಮಿಕ ಎಂಬ ಪದವಿದೆ ವಿನಃ ಕಾರ್ಮಿಕಿ ಎಂಬುದಿಲ್ಲ. ಮಹಿಳಾ ಕಾರ್ಮಿಕರು ಎಂದೇ ಸಂಬೋಧಿಸಲಾಗುತ್ತದೆ.
ನೇಕಾರಿಕೆ ವೃತ್ತಿಯಲ್ಲಂತೂ ಸಮಸ್ತವೂ ಮಹಿಳಾ ಕೇಂದ್ರಿತವೇ. ನೂಲು ಸುತ್ತುವುದು, ಬಣ್ಣ ಹಾಕುವುದು, ನೂಲುವುದು, ಕಸೂತಿ ಮಾಡುವುದು, ಕಟ್‌ ಮಾಡುವುದು, ಪ್ಯಾಕಿಂಗ್‌ ಹೀಗೆ ಎಲ್ಲದನ್ನೂ ಮಹಿಳೆಯರೇ ಮಾಡುತ್ತಾರೆ. ಪುರುಷರು ಮಾರ್ಕೆಟಿಂಗ್‌ ಮಾತ್ರ ಮಾಡುತ್ತಾರೆ. ಆದರೆ ನೇಕಾರ ಎಂಬ ಪದವಿದೆಯೇ ವಿನಃ ನೇಕಾರಿ ಎಂಬ ಪದವೇ ಇಲ್ಲ.
ಇಂಗ್ಲಿಷ್‌ನಲ್ಲಿ ಅಗ್ರಿಕಲ್ಚರಿಸ್ಟ್‌, ಲೇಬರ್‌ ಎಂಬ ಪದವನ್ನು ಬಳಸಲಾಗುತ್ತಿದೆಯೇ ವಿನಃ ಮಹಿಳಾ ವಾಚಕವಾಗಿ ನಿರ್ದಿಷ್ಟ ಪದ ಬಳಕೆಯಲ್ಲಿ ಇಲ್ಲ. ಭಾಷೆ ಕೂಡ ಮಹಿಳೆಯರನ್ನು ಅಷ್ಟು ಮೈಲಿಗೆಯಾಗಿ ನಡೆಸಿಕೊಂಡಿದೆ. ಇನ್ನೂ ಕೂಡ ನಡೆಸುತ್ತಲೇ ಇದೆ. ಪೊಲೀಸ್‌ ಎಂಬ ಪದಕ್ಕೆ ಪೇದೆ ಎಂಬ ಪರ್ಯಾಯ ಪದವಿದೆ. ಆದರೆ ಇದಕ್ಕೆ ಸಂವಾದಿ ಪದ ಮಹಿಳಾ ಪೇದೆ ಎಂದಷ್ಟೇ ಆಗಿದೆ.
ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಎಂಬ ವಿಷಯದಲ್ಲೂ ಇದೇ ಚರ್ಚೆ ನಡೆದಿತ್ತು. ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರನ್ನು ಏನೆಂದು ಕರೆಯಬೇಕೆಂದು ಚರ್ಚೆ ನಡೆಯಿತು. ಕೊನೆಗೆ ರಾಷ್ಟ್ರಪತಿ ಎಂಬ ಪುರುಷ ವಾಚಕ ಪದವನ್ನೇ ಉಳಿಸಿಕೊಳ್ಳಲಾಯಿತು.
ಸ್ತ್ರೀವಾದಿಗಳು:
ಹಾದಿ ಬೀದಿಯಲ್ಲಿ, ವೇದಿಕೆ, ಸಮಾರಂಭಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಸ್ವಘೋಷಿತ ಸ್ತ್ರೀವಾದಿಗಳದು ಮತ್ತೊಂದು ಕತೆ. ಮನೆಯಲ್ಲಿ ಬೆಡ್‌ಕಾಫಿ ಕೊಡಲು, ಎಲ್ಲೋ ಇಟ್ಟ ಸಿಗರೇಟು ಹುಡುಕಿ ಕೊಡಲು, ಸ್ನಾನಕ್ಕೆ ನೀರು ಅಣಿ ಮಾಡಲು, ಕಚೇರಿಗೆ ಹೊರಟಾಗ ಗರಿಗರಿ ಇಸ್ತ್ರಿ ಮಾಡಿದ ಬಟ್ಟೆ ತಂದುಕೊಡಲು ಹೆಂಡತಿಯೇ ಬೇಕು. ಹೆಂಡತಿ ಉದ್ಯೋಗದಲ್ಲಿದ್ದು, ಬೆಳಿಗ್ಗೆಯೇ ಡ್ಯೂಟಿಗೆ ಹೋಗಬೇಕಾಗಿದ್ದರೂ ಕೂಡ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಮಾತಿಗೆ ಮಾತ್ರ ಸ್ತ್ರೀವಾದಿಗಳಿವರು.
ಹಾಗೆ ನೋಡಿದರೆ ಗ್ರಾಮೀಣ ಪ್ರದೇಶದಲ್ಲಿ ಗಂಡಸರು ಸಾಕಷ್ಟು ಮನೆ ಕೆಲಸ ಮಾಡಿಕೊಡುತ್ತಾರೆ. ಹಸು ಕಟ್ಟುವುದು, ಹುಲ್ಲು ಹಾಕುವುದು, ಸೆಗಣಿ ಬಾಚುವುದು, ಹಾಲು ಕರೆಯುವುದು ಕನಿಷ್ಠ ಇಂತಹ ಕೆಲಸಗಳಲ್ಲಾದರೂ ಪುರುಷರ ಪಾಲಿರುತ್ತದೆ. ಆದರೆ ಮಾತಿನಲ್ಲಿ ಸ್ತ್ರೀವಾದಿ ಚಿಂತನೆಗಳನ್ನು ಪುಂಖಾನುಪುಂಖವಾಗಿ ಹೇಳುವ, ಪುಟಗಟ್ಟಲೇ ಬರೆಯುವ ಸ್ತ್ರೀವಾದಿ ಪುರುಷರು ರೂಢಿಯಲ್ಲಿ ಮಾತ್ರ ಪುರುಷಾಧಿಪತ್ಯದ ಸಾಕಾರಮೂರ್ತಿಗಳಾಗಿರುತ್ತಾರೆ.
ರಾಜಕೀಯ:
ರಾಜಕೀಯದಲ್ಲಿ ಸ್ತ್ರೀ ಪುರುಷರು ಸಮಾನರು ಎಂದು ಭಾವಿಸಲಾಗುತ್ತದೆ. ಆಚರಣೆಯಲ್ಲಿ ಮಾತ್ರ ಅದು ಶೂನ್ಯವಾಗಿರುತ್ತದೆ. ಶೇ.33 ರಷ್ಟು ಮೀಸಲಾತಿಗಾಗಿ ಮಹಿಳೆಯರು ಹಕ್ಕೊತ್ತಾಯ ಮಂಡಿಸುತ್ತಾ ದಶಕಗಳೇ ಕಳೆದುಹೋಗಿವೆ. ಇನ್ನೂ ಕೂಡ ಪುರುಷರು ಅದನ್ನು ಕೊಡಲು ಬಿಟ್ಟಿಲ್ಲ. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಯುಪಿ ಎ ನೇತೃತ್ವದ ಸರ್ಕಾರದ ಸೂತ್ರಧಾರಿ ಸೋನಿಯಾಗಾಂಧಿ ಎಂಬ ಮಹಿಳೆಯೇ ಆಗಿದ್ದರೂ, ಅತ್ಯುನ್ನತ ಸ್ಥಾನದಲ್ಲಿ ಪ್ರತಿಭಾಪಾಟೀಲ್‌ ಉಪಸ್ಥಿತರಿದ್ದರೂ ಈ ಕಾಯ್ದೆ ಜಾರಿಗೆ ಬಂದಿಲ್ಲ.
ದೇಶದ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯೆ 30 ಲಕ್ಷದಷ್ಟಿದ್ದು, ಆ ಪೈಕಿ 10 ಲಕ್ಷ ಮಹಿಳೆಯರಿದ್ದಾರೆ. ಆದರೆ ಸ್ತ್ರೀ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ. ಆಕಾಶದ ಅರ್ಧ ನಕ್ಷತ್ರಗಳು ನಾವು, ಈ ಭೂಮಿಯಲಿ ಅರ್ಧ ಕೇಳುವೆವು ಎಂದು ಮಹಿಳೆಯರು ಘೋಷಣೆ ಹಾಕುತ್ತಲೇ ಬಂದಿದ್ದಾರೆ. ಆದರೆ ಪುರುಷರು ಒಂದು ಹಾದಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬ ಹಠಕ್ಕೆ ಕೂತಿದ್ದಾರೆ.
ಇನ್ನು ಅಧಿಕಾರ ಸಿಕ್ಕಿರುವ ಕಡೆ( ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಹಾಗೂ ಶಾಸಕಿ ಸ್ಥಾನದಲ್ಲಿ) ಕೂಡ ಅವರ ಗಂಡಂದಿರೇ ಅಧಿಕಾರ ಚಲಾಯಿಸುವ ಸೂತ್ರಧಾರಿಗಳಾಗಿರುತ್ತಾರೆ. ಹೆಸರಿಗೆ ಮಹಿಳೆ ಅಧ್ಯಕ್ಷರಾಗಿದ್ದರೂ ಆಂಟಿ ಚೇಂಬರ್‌ನಲ್ಲಿ ಅಧಿಕಾರ, ವ್ಯವಹಾರ ನಡೆಸುವವರು ಆಕೆಯ ಗಂಡಂದಿರೇ ಆಗಿರುತ್ತಾರೆ.
ಮಹಿಳೆಯರು ಅಧಿಕಾರ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ ಪುರುಷರು ಅದಕ್ಕೆ ಅವಕಾಶ ಕೊಡುವುದಿಲ್ಲ. ಅವರಲ್ಲಿ ಸಂಘಟನೆಯಾಗದೇ, ಅವರೇ ಅಧಿಕಾರ ಕೈಗೆತ್ತಿಕೊಳ್ಳದೇ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕಾಗಿದೆ.

Sunday, November 9, 2008

ಬಾಲ್ಯವೂ ಮುಖ್ಯ : ಆದ್ರೆ ಎಚ್‌ಐವಿ ಸಖ್ಯ

ಬಾಲ್ಯ-1
ಈಕೆಯ ಹೆಸರು ಋತು. ವರ್ಷ ಹತ್ತು. ಮೆಜೆಸ್ಟಿಕ್‌ನಲ್ಲಿ ಈಕೆಯ ಅಮ್ಮ ಲೈಂಗಿಕ ಕಾರ್ಯಕರ್ತೆ. ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ವೃತ್ತಿ. ಜತೆಗೆ ಬ್ರೌನ್‌ಶುಗರ್‌ ಚಟ. ತಾಯಿ ತಿನ್ನುತ್ತಿದ್ದ ಬಿಳಿಯ ಸಕ್ಕರೆ ತಿಂದು ರೂಢಿಯಾಗಿ ಮತ್ತಿನಲ್ಲೇ ಮುಳುಗಿದ್ದಾಕೆ. ವೃತ್ತಿ ಜೀವನದಲ್ಲಿ ಮುನ್ನೆಚ್ಚರಿಕೆ ವಹಿಸದೇ ಇದ್ದುದರಿಂದ ಅಂಟಿಕೊಂಡ ಎಚ್‌ಐವಿ, ಏಡ್ಸ್‌ಗೆ ತಿರುಗಿ ತಾಯಿ-ತಂದೆ ಮೃತಪಟ್ಟರು. ಅನಾಥಳಾದ ಋತುಗೆ ಆಶ್ರಯ ನೀಡಿದ್ದು ಱಅಕ್ಸೆಪ್ಟ್‌ನ ಮಕ್ಕಳ ಮನೆ. ಇಲ್ಲಿ ಸೇರಿದಾಗ ಚಿಕ್ಕವಯಸ್ಸಿನಲ್ಲೇ ಮಾದಕ ವ್ಯಸನಿಯಾಗಿದ್ದ ಋತು, ಮಂಕಾಗಿರುತ್ತಿದ್ದಳು. ತಾಯಿಯಿಂದ ಬಳುವಳಿಯಾಗಿ ಬಂದಿದ್ದ ಎಚ್‌ಐವಿ ಜತೆಗಿತ್ತು. ಮಕ್ಕಳ ಮನೆಗೆ ಸೇರಿ ಎರಡು ವರ್ಷವಾಗಿದ್ದು, ಇದೀಗ ಮಾದಕ ವ್ಯಸನ ಮುಕ್ತಳಾಗಿ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಕೂಡ ನಿಯಂತ್ರಣದಲ್ಲಿದೆ. ಆಕೆಯ ಮುಖದಲ್ಲಿ ನಗು ಅರಳಿದೆ.
ಬಾಲ್ಯ-2
ಹೆಸರು ಶ್ರವ್ಯ. ಏಳು ವರ್ಷ. ತಮಗೆ ಎಚ್‌ಐವಿ ಬಂದಿದೆ ಎಂದು ಗೊತ್ತಾದ ಕೂಡಲೇ ತಂದೆ-ತಾಯಿ ಇಬ್ಬರೂ ಜತೆಗೇ ನೇಣಿಗೆ ಕೊರಳೊಡ್ಡಿದರು. ತನ್ನಂತ ಹಸುಗೂಸನ್ನು ಬಿಟ್ಟು ಯಾಕೆ ಸಾವಿಗೆ ಶರಣಾದರು ಎಂಬ ಪ್ರಜ್ಞೆಯೂ ಇಲ್ಲದ ವಯಸ್ಸು ಶ್ರವ್ಯಳದು. ಹಗ್ಗಕ್ಕೆ ಕುಣಿಕೆ ಹಾಕಿಕೊಂಡ ತಂದೆ-ತಾಯಿಯರ ನೆನಪು ಆಕೆಯನ್ನು ಬಿಡಲೊಲ್ಲದು. ಸಲಹಲು ಯಾರೂ ಇಲ್ಲದ ಶ್ರವ್ಯಳಿಗೂ ಕೂಡ ಎಚ್‌ಐವಿಯನ್ನು ಉಡುಗೊರೆಯಾಗಿ ಕೊಟ್ಟು ಅವರಿಬ್ಬರು ಪರಲೋಕ ಸೇರಿದ್ದರು. ತಂದೆ ತಾಯಿಯ ಗುಂಗಿನಲ್ಲೇ ಎಚ್‌ಐವಿ ಜತೆಗೆ ಅಕ್ಸೆಪ್ಟ್‌ಗೆ ಸೇರ್ಪಡೆಗೊಂಡ ಶ್ರವ್ಯ ಇದೀಗ ಮನೆಯ ವಾತಾವರಣವನ್ನು ಅನುಭವಿಸುತ್ತಿದ್ದಾಳೆ. ತನ್ನಂತೆಯೇ ಎಚ್‌ಐವಿ ಬಾಧಿತ ಮಕ್ಕಳೊಂದಿಗೆ ಪಾಟಿ ಚೀಲ ಹೆಗಲಿಗೆ ಹಾಕಿಕೊಂಡ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಇರುವುದು ಆಕೆಗೂ ಗೊತ್ತಾಗಿದ್ದು, ಸುತ್ತಲ ವಾತಾವರಣ ಆಕೆಯಲ್ಲಿ ವಿಶ್ವಾಸ ಮೂಡಿಸಿದೆ.
ಬಾಲ್ಯ-3
ಹೆಸರು ಮುಸ್ತಾಫ. 2 ವರ್ಷ. ಆತನಿಗೆ ಯಾರಿಟ್ಟ ಹೆಸರೋ ಅದು ಗೊತ್ತಿಲ್ಲ. ದೂರದ ಮುಂಬೈನಿಂದ ಬೆಂಗಳೂರಿನ ಅಕ್ಸೆಪ್ಟ್‌ ಮಕ್ಕಳ ಮನೆ ಸೇರಿದೆ. ಭಾಷೆಯೇ ಗೊತ್ತಿಲ್ಲದ, ಗುರುತು ಪರಿಚಯಸ್ಥರೇ ಇಲ್ಲದ ನೆಲೆಯಲ್ಲಿ ಆಡಿಕೊಂಡು ಬೆಳೆಯುತ್ತಿದೆ. ಎಚ್‌ಐವಿ ಹೋಗಲಿ, ಜ್ವರವೆಂದರೆ ಏನೆಂಬ ಅರಿವು ಅದಕ್ಕಿಲ್ಲ. ಮಕ್ಕಳ ಮನೆಯಲ್ಲಿರುವ ನಿಸ್ಪೃಹ ಸೇವಾಕರ್ತರು, ವೈದ್ಯರ ಉಪಚಾರದಲ್ಲಿ ಅದು ಬೆಳೆಯುತ್ತಿದೆ.
* * *
ನವೆಂಬರ್‌ 14 ಮಕ್ಕಳ ದಿನಾಚರಣೆ. ಭಾರತದ ಮೊದಲ ಪ್ರಧಾನಿ ಚಾಚಾ ನೆಹರು ತಮ್ಮ ಹುಟ್ಟಿದ ದಿನವನ್ನು ತಮ್ಮ ಪ್ರೀತಿಯ ಮಕ್ಕಳ ದಿನಾಚರಣೆಯಾಗಿ ಘೋಷಿಸಿದ ದಿನ. ತಾನು ಕಟ್ಟಿದ ನಾಡಿನಲ್ಲಿ ಇಂತಹ ನತದೃಷ್ಟ, ಸಮಾಜದಲ್ಲಿ ಯಾರಿಗೂ ಬೇಡವಾಗಿ, ಒಂದರ್ಥದಲ್ಲಿ ಱಕಳಂಕಿತರಾಗಿ ಮಕ್ಕಳು ಬದುಕಬೇಕಾದ ಸ್ಥಿತಿ ಉಂಟಾಗುತ್ತದೆ ಎಂದು ಗೊತ್ತಿದ್ದರೆ ನೆಹರೂ ಹಾಗೆಂದು ಘೋಷಿಸುತ್ತಿರಲಿಲ್ಲವೇನೋ. ಸದಾ ಗುಲಾಬಿಯಂತೆ ಮಕ್ಕಳನ್ನು ಪ್ರೀತಿಸುತ್ತಿದ್ದ ನೆಹರು ಈಗ ಇಂತಹ ಮಕ್ಕಳನ್ನು ನೋಡಿದ್ದರೆ ಏನೆಂದು ಪ್ರತಿಕ್ರಿಯಿಸುತ್ತಿದ್ದರೋ ಗೊತ್ತಿಲ್ಲ.
ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಗುಬ್ಬಿ ಸಮೀಪ ಱಅಕ್ಸೆಪ್ಟ್‌ ಎಂಬ ಸಂಸ್ಥೆ ಮಕ್ಕಳ ಮನೆ ನಡೆಸುತ್ತಿದೆ. ಕೆಆರ್‌ಸಿ ರಸ್ತೆಯಲ್ಲಿರುವ ಇಲ್ಲಿ ನಿರ್ಗತಿಕರಾದ ಆದರೆ ಎಚ್‌ಐವಿಯಿಂದ ಸಮೃದ್ಧರಾದ 16 ಮಕ್ಕಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಮಗೆ ಯಾರೂ ಇಲ್ಲವೆಂಬ ನೋವನ್ನು ಮರೆತಿದ್ದಾರೆ. ಹೆತ್ತ ಮಕ್ಕಳನ್ನೇ ಕಡೆಗಣಿಸಿ, ಕೈಯಾರೆ ಕೊಲೆ ಮಾಡುವ ಈ ದಿನಗಳಲ್ಲಿ ಯಾರದೋ ಮಕ್ಕಳನ್ನು ಇಲ್ಲಿ ಪ್ರೀತಿಯಿಂದ ಸಲಹಲಾಗುತ್ತಿದೆ. ಜಾತಿ, ಧರ್ಮ, ಲಿಂಗಬೇಧವೆಂಬುದು ಇಲ್ಲಿ ಕಾಣೆಯಾಗಿದೆ. ಮನುಷ್ಯ ಪ್ರೀತಿಯ ಸಹಜ ಕಕ್ಕುಲಾತಿ ಇಲ್ಲಿ ಸಮುದ್ರದಷ್ಟು ವಿಶಾಲವಾಗಿ ಹರಡಿಕೊಂಡಿದೆ.
ಎಚ್‌ಐವಿ ಬಾಧಿತ ಮಕ್ಕಳು ಹಾಗೂ ವಯಸ್ಕರಿಗೆ ಚಿಕಿತ್ಸೆ ನೀಡಲು 9 ಸಮಾನ ಮನಸ್ಕ ಸಹೃದಯರು ಸೇರಿ ಆರಂಭಿಸಿದ ಅಕ್ಸೆಪ್ಟ್‌ ಸಂಸ್ಥೆ ಅನಾಥ ಮಕ್ಕಳ ಪಾಲಿನ ತಾಯಿ- ತಂದೆ- ಶಿಕ್ಷಕ- ವೈದ್ಯರ ಪಾತ್ರವನ್ನು ನಿರ್ವಹಿಸುತ್ತಿದೆ. ಅಕ್ಸೆಪ್ಟ್‌ನ ಅಧ್ಯಕ್ಷ ರಾಜು ಮ್ಯಾಥ್ಯೂ ಹೇಳುವುದು ಹೀಗೆ: ಇಲ್ಲಿರುವ ಮಕ್ಕಳು ಒಂದೊಂದು ವಯಸ್ಸಿನವರಿದ್ದಾರೆ. 2 ವರ್ಷದಿಂದ 15 ವರ್ಷದವರೆಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಅವರನ್ನು ನೋಡಲು ಇಬ್ಬರು ಕೇರ್‌ಟೇಕರ್‌, ಶಿಕ್ಷಣ ಕಲಿಸಲು ಒಬ್ಬರು ಶಿಕ್ಷಕರು, ಇಬ್ಬರು ಆಪ್ತ ಸಮಾಲೋಚಕರು, ಇಬ್ಬರು ವೈದ್ಯರು ಇದ್ದಾರೆ. ಪ್ರತಿಯೊಬ್ಬರಿಗೂ ಉಳಿದುಕೊಳ್ಳಲು ವ್ಯವಸ್ಥೆ, ಊಟ, ಬಟ್ಟೆ ಉಚಿತವಾಗಿ ನೀಡಲಾಗುತ್ತಿದೆ. ಹತ್ತಿರದ ಶಾಲೆಯೊಂದರಲ್ಲಿ ಇವರೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೆಳೆಯುವ ಮನಸ್ಸು, ಬರುತ್ತಿರುವ ಹರೆಯ, ಎಚ್‌ಐವಿಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬಂದೊದಗುವ ಕಾಯಿಲೆ, ಪೋಷಕರಿಲ್ಲದುದರಿಂದ ಮೂಡುವ ಅನಾಥಭಾವ ಈ ಎಲ್ಲದಕ್ಕೆ ಆಪ್ತಸಮಾಲೋಚನೆ ನೀಡಬೇಕಾದ ಹೊಣೆಗಾರಿಕೆ. ಸಾಮಾನ್ಯ ಮಕ್ಕಳಂತಿಲ್ಲದ ಇವರನ್ನು ನೋಡಿಕೊಳ್ಳುವಲ್ಲಿ ತಾಳ್ಮೆ ಅಗತ್ಯ ಎನ್ನುತ್ತಾರೆ.
ದುಡಿಯುವ ದೈಹಿಕ ಸಾಮರ್ಥ್ಯ ಕಡಿಮೆ ಇರುವುದರಿಂದ ಇವರ ಭವಿಷ್ಯದ ಬಗ್ಗೆ ತಮಗೆ ಚಿಂತೆಯಾಗಿದೆ. ಹೇಗೋ ಓದಿಸಬಹುದು. ಮಾನಸಿಕ ಸದೃಢತೆ ಇಲ್ಲದೇ ಇರುವುದರಿಂದ ಓದಿನಲ್ಲಿ ಇವರು ಹೆಚ್ಚಿನದನ್ನು ಸಾಧಿಸಲಾರರು. ಹಾಗಾಗಿ ಇವರಿಗೆ ಸ್ವ ಉದ್ಯೋಗ ತರಬೇತಿ ನೀಡಲು ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಮುಂದೆ ಬರಬೇಕಿದೆ. ತಂದೆತಾಯಂದಿರ ನೆಂಟರು ಇವರಿಗೆ ಸಹಾಯ ಹಸ್ತ ಚಾಚಬೇಕು, ಆದರೆ ಯಾರೂ ಮುಂದೆ ಬರುವುದಿಲ್ಲ ಎಂದು ಹೇಳುವ ರಾಜು ಮ್ಯಾಥ್ಯೂ, ಸಹೃದಯರು ದತ್ತು ತೆಗೆದುಕೊಳ್ಳಲು ಮುಂದೆ ಬರಬೇಕೆಂದು ಆಶಿಸುತ್ತಾರೆ. ಇಲ್ಲವಾದಲ್ಲಿ ಈ ಮಕ್ಕಳಿಗೆ ಬಟ್ಟೆ, ಊಟ, ಸ್ಕೂಲು ಬ್ಯಾಗು, ಪುಸ್ತಕ ಕೊಡಿಸಲಾದರೂ ಸಹಾಯ ಮಾಡಿದರೆ ಉಪಕಾರವಾಗುತ್ತದೆ ಎನ್ನುತ್ತಾರೆ.
ಇಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಎಚ್‌ಐವಿ ಬಾಧಿತ ವಯಸ್ಕರಿಗೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. 35 ಮಂದಿ ವಯಸ್ಕರಿಗೆ ಉಳಿದುಕೊಂಡು ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಎಚ್‌ಐವಿ ಬಾಧಿತರಿಗೆ ಸಾಮಾನ್ಯವಾಗಿ ತಗಲುವ ಟಿ.ಬಿ. ಕಾಯಿಲೆಯಿಂದ ತೊಂದರೆಗೊಳಗಾದವರಿಗೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಎಚ್‌ಐವಿ ಬಾಧಿತ ಮಕ್ಕಳು:
ಕರ್ನಾಟಕದಲ್ಲಿ ದಾಖಲಾದ ಎಚ್‌ಐವಿ ಬಾಧಿತ ಮಕ್ಕಳ ಸಂಖ್ಯೆ 5,700. ಇವರಲ್ಲಿ 1663 ಮಕ್ಕಳು ಆ್ಯಂಟಿ ರೆಟ್ರೋ ವೈರಲ್‌ ಥೆರಪಿಗೆ ಒಳಗಾಗಿದ್ದಾರೆ. ಅಂದರೆ ಇವರಿಗೆ ಏಡ್ಸ್‌ ತಗುಲಿದೆ. ಸರ್ಕಾರಿ ಲೆಕ್ಕ ಇದಾಗಿದ್ದು ಇನ್ನೂ ಪತ್ತೆಯಾಗದವರ ಸಂಖ್ಯೆ ಹೆಚ್ಚಾಗಿಯೇ ಇರಬಹುದೆಂದು ಅಂದಾಜಿಲಾಗಿದೆ.
ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ( ನ್ಯಾಕೋ) ಪ್ರಕಾರ ಭಾರತದಲ್ಲಿ 70 ಸಾವಿರ ಮಕ್ಕಳು ಎಚ್‌ಐವಿ ಬಾಧಿತರಾಗಿದ್ದಾರೆ. ಇವರಲ್ಲಿ 10 ಸಾವಿರ ಮಂದಿ ಎ ಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಎಚ್‌ಐವಿ ಬಾಧಿತರ ಸಂಖ್ಯೆ 5.1 ಮಿಲಿಯನ್‌ ಎಂದು ಲೆಕ್ಕ ಹಾಕಲಾಗಿದೆ. 2005 ರಲ್ಲಿ ಅಂದಾಜು ಮಾಡಿದಂತೆ ಶೇ.33 ರಷ್ಟು ಮಂದಿ ಏಡ್ಸ್‌ ಬಾಧಿತರು 15 ರಿಂದ 29 ವರ್ಷದ ಒಳಗಿನವರು. ದೇಶದ ಮೂರನೇ ಒಂದು ಭಾಗದಷ್ಟು ಅಂದರೆ 10-24 ವರ್ಷ ವಯಸ್ಸಿನವರು ಸುಲಭವಾಗಿ ಎಚ್‌ಐವಿ ಸೋಂಕು ತಗಲುವ ಸಾಧ್ಯತೆಯಿರುವವರಿದ್ದಾರೆಂದು ವಿಶ್ಲೇಷಿಸಲಾಗಿದೆ. ಲೈಂಗಿಕ ಕುತೂಹಲವುಳ್ಳ ಆದರೆ ಸುರಕ್ಷಿತ ಲೈಂಗಿಕತೆ ಬಗ್ಗೆ ಪರಿಜ್ಞಾನವಿಲ್ಲದ ವಯಸ್ಸಿನವರು ಸುಲಭವಾಗಿ ಎಚ್‌ಐವಿಗೆ ತುತ್ತಾಗಬಹುದಾಗಿದ್ದು, ಇವರಲ್ಲಿ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಇದರ ಜತೆಗೆ ಆತಂಕ ಪಡುವ ಸಂಗತಿಯೆಂದರೆ ದೇಶದಲ್ಲಿ 3 ಲಕ್ಷ ಮಕ್ಕಳನ್ನು ವ್ಯಾವಹಾರಿಕವಾಗಿ ಲೈಂಗಿಕ ಕಾರ್ಯಕರ್ತನ್ನಾಗಿಸಲಾಗಿದೆ.
ಚಿಲ್ಡ್ರನ್‌ ಅಫೆಕ್ಟಡ್‌ ಬೈ ಎಚ್‌ಐವಿ ಆರ್‌ ಏಡ್ಸ್‌(ಕಾಹಾ) ಚಾರ್ಟರ್‌ ಎಂದು ಕರೆಯಲಾದ ಕಾರ್ಯಕ್ರಮದಲ್ಲಿ 53 ಮಕ್ಕಳು ಪಾಲ್ಗೊಂಡಿದ್ದರು. ನ್ಯಾಕೋದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 14 ಶಿಫಾರಸ್ಸುಗಳನ್ನು ಮಾಡಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮಕ್ಕಳ ಬೆಂಬಲಿಗ ಗುಂಪು ರಚನೆ, ಎಚ್‌ಐವಿ ಬಾಧಿತ ಮಕ್ಕಳಲ್ಲಿ ಅರಿವು ಮೂಡಿಸುವುದು, ಮನೋಸಾಮಾಜಿಕ ಬೆಂಬಲವನ್ನು ಕಲ್ಪಿಸುವುದು, ಮಕ್ಕಳ ಆಪ್ತಸಮಾಲೋಚಕರನ್ನು ತರಬೇತುಗೊಳಿಸುವುದು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಪೋಷಕರಿಗೆ ಸಮಾಜೋ ಆರ್ಥಿಕ ಬೆಂಬಲ ನೀಡುವುದು, ತಪ್ಪು ಕಲ್ಪನೆ ಹಾಗೂ ತಾರತಮ್ಯ ಭಾವನೆ ತೊಲಗಿಸುವುದು, ಎಚ್‌ಐವಿ ಮಕ್ಕಳ ಬೆಂಬಲಕ್ಕೆ ನಿಲ್ಲುವ ಸಂಸ್ಥೆಗಳನ್ನು ಬಲಗೊಳಿಸುವುದು, ಶಿಕ್ಷಣ ಹಾಗೂ ವಸತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಆಗಬೇಕಿದೆ ಎಂದು ಶಿಫಾರಸ್ಸು ಹೇಳಿದೆ.

Monday, November 3, 2008

`ಶಾಸ್ತ್ರೀ'ಯ ಭಾಷೆ

`ಶಾಸ್ತ್ರೀ'ಯ ಭಾಷೆ

ಊರ ಗೌಡರ ಮಗಳು ಮೈನೆರೆದರೆ ಊರವರಿಗೆ ಏನು ಲಾಭ? ಹೆಚ್ಚೆಂದರೆ ಒಂದು ಹೋಳಿಗೆ ಊಟ ಸಿಗಬಹುದಷ್ಟೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದ್ದರ ಬಗ್ಗೆ ಇಷ್ಟು ನಿಕೃಷ್ಟವಾಗಿ ಹೇಳುವುದು ಅನೇಕರಿಗೆ ತಥ್ಯವಾಗದೇ ಇರಬಹುದು. ಆದರೆ ಶಾಸ್ತ್ರೀಯ ಭಾಷೆ ಘೋಷಣೆಯಾದ ಮೇಲೆ `ಪೋಸ್ಟ್‌ ಮಾರ್ಟಂ'ಗೆ ಹೊರಟರೆ ಇದು ಅಪಥ್ಯವಾಗಲಿಕ್ಕಿಲ್ಲ.
ಶಾಸ್ತ್ರೀಯ ಭಾಷೆಯೆಂದು ಘೋಷಣೆಯಾದ ಮಾತ್ರಕ್ಕೆ ಕನ್ನಡದಲ್ಲೇ ಕಲಿತ ಮಣ್ಣಿನ ಮಕ್ಕಳಿಗೆ ಏನು ಸಿಗುತ್ತದೆ? ಕನ್ನಡ ಬಿಟ್ಟರೆ ಬೇರಾವ ಭಾಷೆ ಬಾರದ ಕೋಟ್ಯಾಂತರ ಬಡ ಬೋರೇಗೌಡರ ಬದುಕಲ್ಲಿ ಏನು ಬದಲಾವಣೆಯಾಗುತ್ತದೆ. ಕನ್ನಡ ಎಂ.ಎ. ಮಾಡಿದವರು ಹೋಗಲಿ, ವಿವಿಧ ಮಾನವಿಕ( ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತಿತ್ಯಾದಿ)ಗಳಲ್ಲಿ ಎಂ.ಎ. ಪಡೆದವರಿಗೆ ಎಲ್ಲಿ ಉದ್ಯೋಗವೇನಾದರೂ ಸಿಗುತ್ತದೆಯೇ? ಆಡಳಿತ ಭಾಷೆಯಾಗಿ ಕನ್ನಡವೊಂದೇ ಉಳಿಯುತ್ತದೆಯೇ? ಕೋರ್ಟ್‌ನಲ್ಲಿ ಕನ್ನಡ ಬಳಕೆಯಾಗುತ್ತದೆಯೇ?
ಯಕಃಶ್ಚಿತ್‌ ಈ ಶ್ರೀಸಾಮಾನ್ಯರ ಬದುಕಲ್ಲಿ ಏನು ಬದಲಾವಣೆಯಾಗುವುದಿಲ್ಲ. ತಮಿಳಿಗೆ ಕೊಟ್ಟಿದ್ದಾರೆ ನಮಗೂ ಕೊಡಬೇಕೆಂಬ ವಾದ ಬಿಟ್ಟರೆ ಮತ್ಯಾವ ಘನ ಉದ್ದೇಶ, ತಾರ್ಕಿಕ ವಾದಗಳನ್ನು ಈ ವಿಷಯದಲ್ಲಿ ಗಟ್ಟಿಧ್ವನಿಯಲ್ಲಿ ಮಾಡಲಾಗುವುದಿಲ್ಲ.
ಜಾಗತೀಕರಣದ ಬಿರುಗಾಳಿಯಲ್ಲಿ ಕನ್ನಡವೊಂದನ್ನೇ ಕಲಿತವನು ಎಲೆಯಂತೆ ಥರಗುಟ್ಟುತ್ತಿದ್ದಾನೆ. ವಿದ್ವಾಂಸರು, ಕನ್ನಡ ಹೋರಾಟಗಾರರು, ಆಷಾಢಭೂತಿ ಆಳುವವರು ಏನೇ ಮಾತನಾಡಲಿ. ಕನ್ನಡವೊಂದನ್ನೇ ಕಲಿತವನು `ತಾನು ಯಾಕಾದರೂ ಇಂಗ್ಲಿಷ್‌ ಕಲಿಯಲಿಲ್ಲ' ಎಂದು ಹಲುಬುವುದು ತಪ್ಪಲಿಲ್ಲ. ಅದು ನಿತ್ಯರೋಧನ.
ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ:
ಪುರಾತನ ಕಾಲದಲ್ಲಿ ಸಂಸ್ಕೃತವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳನ್ನು ಅಪಭ್ರಂಶವೆಂದು ದಸ್ಯಗಳ(ಸೇವಕರ) ಭಾಷೆಯೆಂದು ಹೀಗಳೆಯಲಾಗುತ್ತಿತ್ತು. ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ರಾಜ, ಮಂತ್ರಿ, ಕಥಾನಾಯಕ ಸಂಸ್ಕೃತದಲ್ಲಿ ಮಾತನಾಡಿದರೆ ದಸ್ಯುಗಳು ಮಾತ್ರ ಪ್ರಾಕೃತ ಅಥವಾ ಅಪಭ್ರಂಶ ಭಾಷೆಯಲ್ಲಿ ಮಾತನಾಡುವುದು ಲಿಖಿತವಾಗಿ ದಾಖಲಾಗಿದೆ.
ಈ ರೀತಿಯ ಮಡಿವಂತಿಕೆಯುಳ್ಳ ಸಂಸ್ಕೃತದ ಜಾಗದಲ್ಲಿ ಈಗ ಇಂಗ್ಲಿಷು ಬಂದು ಕುಳಿತಿದೆ. ಕನ್ನಡದಲ್ಲಿ ಓದಿದವರಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದೆ. ಸರ್ಕಾರಿ ಉಸ್ತುವಾರಿಯಲ್ಲಿ ನಡೆಯುತ್ತಿರುವ ಕನ್ನಡ ಶಾಲೆಗಳಿಗೆ ಸ್ಲಂಬಾಲರು, ಬಡ ಮಕ್ಕಳು, ಬಡ ಮತ್ತು ಮಧ್ಯಮ ವರ್ಗದ ಕೃಷಿಕರ ಮಕ್ಕಳು ಮಾತ್ರ ಹೋಗುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿರುವವರು, ಶ್ರೀಮಂತ ಕೃಷಿಕರು, ವ್ಯವಹಾರ ನಡೆಸುವವರ ಮಕ್ಕಳು ಇಂಗ್ಲಿಷು ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಕನ್ನಡ ಅವಜ್ಞೆಗೆ ತುತ್ತಾದ ಭಾಷೆಯಾಗಿರುವಾಗಲೇ ಅದಕ್ಕೆ `ವಿಶ್ವಮಾನ್ಯತೆ' ತಂದುಕೊಡುವ ಶಾಸ್ತ್ರೀಯ ಭಾಷೆಯ ಹಕ್ಕೊತ್ತಾಯ ಕೇಳಿಬಂದಿತು. ತಮ್ಮ ಮಕ್ಕಳನ್ನೆಲ್ಲಾ ಇಂಗ್ಲಿಷು ಶಾಲೆಯಲ್ಲಿ ಓದಿಸಿ, ಒಳ್ಳೆಯ ಉದ್ಯೋಗ ಕೊಡಿಸಿರುವ ಸಾಹಿತಿ, ಬುದ್ದಿ ಜೀವಿಗಳ ಮಕ್ಕಳು ಕನ್ನಡಕ್ಕಾಗಿ ಇಂದು ತಮ್ಮ ಉಪವಾಸ, ಮಾತಿನ ಖಡ್ಗ ಝಳಪಿಸುತ್ತಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ, ಕನ್ನಡ ಬಲ್ಲವರಿಗೆ ಮಾತ್ರ ರಾಜ್ಯದಲ್ಲಿ ಪ್ರಮುಖ ಸ್ಥಾನ ಎಂಬ ಹಕ್ಕೊತ್ತಾಯ ಯಾರಿಂದಲೂ ಕೇಳಿ ಬರುತ್ತಿಲ್ಲ. ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್‌ನ್ನು ಒಂದು ಪಠ್ಯವಾಗಿ ಕಲಿಸಲು ಈ ಪ್ರಭೃತಿಗಳು ಬಿಡುತ್ತಿಲ್ಲ. ಎಲ್ಲಾ ಮಕ್ಕಳು ಇಂಗ್ಲಿಷು ಕಲಿತರೆ ನವ ಬ್ರಾಹ್ಮಣರ ಮಕ್ಕಳ ಉದ್ಯೋಗಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕ ಇವರದು.
ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ ಎಂಬುದು ಕೇವಲ ಕಲ್ಪನೆಯಲ್ಲ. ಸದ್ಯದ ಸುಡು ವಾಸ್ತವ. ಕನ್ನಡವೆಂಬುದು ಮೈಲಿಗೆಯಾಗಿ, ಯು.ಆರ್‌. ಅನಂತಮೂರ್ತಿ ಹೇಳುವಂತೆ ಕೇವಲ ಅಡುಗೆ ಮನೆ ಭಾಷೆಯಾಗಿ ಉಳಿಯಲಿರುವ ಸಂಕಟದಲ್ಲಿ ನಾವಿದ್ದೇವೆ. ಆ ಹೊತ್ತಿನಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಕ್ಕಿದೆ.
ಲಾಭವೇನು?
ತಮಿಳಿಗೆ ಸಿಕ್ಕಿತೆಂದು ನಾವೆಲ್ಲಾ ಒಕ್ಕೊರಲಿನಿಂದ ಕನ್ನಡಕ್ಕೂ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಗಬೇಕೆಂದು ಹಕ್ಕೊತ್ತಾಯ ಮಂಡಿಸಿದೆವು. ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ, ಮುಂಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೂ ಒಂದು ಶಾಸ್ತ್ರೀಯ ಸ್ಥಾನ ಮಾನ ಘೋಷಿಸಿದೆ.
ಪ್ರಾಚೀನ ಸಾಹಿತ್ಯ ಹಾಗೂ ಭಾಷಾ ಚರಿತ್ರೆ ಬಗ್ಗೆ ಸಂಶೋಧನೆ ನಡೆಸುವ ವಿದ್ವಾಂಸರಿಗೆ 2 ರಾಷ್ಟ್ರಮಟ್ಟದ ಪ್ರಶಸ್ತಿ, ಅಧ್ಯಯನ ನಡೆಸಲು ಅನುದಾನ, ಕೇಂದ್ರೀಯ ವಿ.ವಿ.ಗಳಲ್ಲಿ ಕನ್ನಡ ಅಧ್ಯಯನ ಪೀಠ, ವಿದೇಶಿ ವಿ.ವಿ.ಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಅವಕಾಶ, ಒಂದಿಷ್ಟು ಫೆಲೋಶಿಪ್‌ಗೆ ಅವಕಾಶವಾಗಲಿದೆ. ಇದರ ಜತೆಗೆ ಕೇಂದ್ರದಿಂದ ಸರಿಸುಮಾರು 100 ಕೋಟಿ ರೂ. ಹೆಚ್ಚಿನ ಅನುದಾನ ಒದಗಿ ಬರಲಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಇದಕ್ಕಾಗಿ ಒಂದು ಸಮಿತಿ ರಚನೆಯಾಗಲಿದ್ದು, ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲಿದೆ.
ಇವಿಷ್ಟು ಬಿಟ್ಟರೆ ಕನ್ನಡ ಉದ್ದಾರ ಅಷ್ಟರಲ್ಲೇ ಇದೆ. ಇದರಿಂದ ಸಾಮಾನ್ಯ ಕನ್ನಡಿಗರಿಗೆ ಏನು ಲಾಭ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅಷ್ಟೆ. ನಮ್ಮ ನೆಲ, ಜಲ ವಿಷಯದ ಬಗ್ಗೆ ಯಾವತ್ತೂ ಚಕಾರವೆತ್ತದ ಜನ ಶಾಸ್ತ್ರೀಯ ಭಾಷೆಗಾಗಿ ಕೂಗಾಡಿ ಅರಚಿದರು. ಹೊಸ ರೈಲ್ವೆ ಮಾರ್ಗಗಳು, ಹೊಸ ರೈಲುಗಳು ಬಾರದೇ ಇದ್ದಾಗ ತೆಪ್ಪಗೆ ಕೂತಿದ್ದ ಮಂದಿ ಕೂಗಾಡಲಾರಂಭಿಸಿದರು. ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಗಳಾಗಿ ಕುಳಿತಿದ್ದರೂ ಯಾರೂ ಮಾತನಾಡಲಿಲ್ಲ. ಹಿಂದುಳಿದ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ 371 ವಿಧಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯಕ್ಕೆ ಯಾರೂ ಧ್ವನಿ ಸೇರಿಸಲಿಲ್ಲ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಇದೇ ಯಡಿಯೂರಪ್ಪನವರ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬಿಜೆಪಿ ಸಂಸದರಾಗಿದ್ದ ಡಾ ಎಂ.ಆರ್‌. ತಂಗಾ ಹಾಗೂ ಬಸವರಾಜಪಾಟೀಲ್‌ ಸೇಡಂ ಅವರು ಆಗಿನ ಗೃಹ ಸಚಿವ ಎಲ್‌. ಕೆ. ಅಡ್ವಾಣಿಯವರ ಮುಂದೆ 371 ವಿಧಿಗೆ ತಿದ್ದುಪಡಿ ತರಲು ಕೋರಿದ್ದರು. ಆಗ ಅಡ್ವಾಣಿ ನಿರಾಶಾದಾಯಕ ಉತ್ತರ ನೀಡಿದ್ದರು.
ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿರುವಾಗ ಇದೇ ಯಡಿಯೂರಪ್ಪ 371 ವಿಧಿಗಾಗಿ ದೆಹಲಿಗೆ ನಿಯೋಗ ಹೋಗುವುದಾಗಿ ಹೇಳುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಮತಗಳ ಇಡುಗಂಟನ್ನು ಸಂಪಾದಿಸುವುದಷ್ಟೇ ಅವರ ಆಶಯ. ರಾಜ್ಯದ ಬಗ್ಗೆ ನಿಜವಾದ ಕಳಕಳಿ ಅವರಿಗಿಲ್ಲ.
ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ಕೂಡ ಅವರ ಅಬ್ಬರ ಇದೇ ರೀತಿಯದು. ಭಾವನಾತ್ಮಕ ವಿಷಯಗಳತ್ತ ಜನರ ಗಮನವನ್ನ ಕೇಂದ್ರೀಕರಿಸಿ, ರಾಜಕೀಯ ಮಾಡಿಕೊಳ್ಳುವ ಹುನ್ನಾರವಿದು. ಶಾಸ್ತ್ರೀಯ ಭಾಷೆಗಾಗಿ ದೆಹಲಿ ಚಲೋ ಮಾಡಲು, ಗಾಂಧಿ ಸಮಾಧಿ ಎದುರು ಧರಣಿ ಕೂರಲು ಸಿದ್ಧರಿರುವ ಯಡಿಯೂರಪ್ಪ, ರೈಲ್ವೆ, ರಸ್ತೆಯಂತಹ ಸಾಮಾನ್ಯ ಬೇಡಿಕೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರದ ಮೇಲೆ ಸೇಡಿನ ಹೋರಾಟಕ್ಕಿಂತ ರಚನಾತ್ಮಕ ಹೋರಾಟವನ್ನು ಮಾಡುವುದು ತುರ್ತಾಗಿ ಆಗಬೇಕಾಗಿರುವ ಕೆಲಸ.
ಇತ್ತೀಚೆಗೆ ಮುಂಬೈನಲ್ಲಿ ಬಿಹಾರಿ ಯುವಕ ಹತ್ಯೆಯಾದಾಗ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಲಾಲು ಪ್ರಸಾದ್‌ ಯಾದವ್‌, ರಾಮವಿಲಾಸ್‌ಪಾಸ್ವಾನ್‌ ಹೀಗೆ ಎಲ್ಲಾ ಪಕ್ಷದ ನಾಯಕರು ಒಂದೇ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು. ರಾಜ್ಯದ ವಿಷಯ ಬಂದಾಗ ರಾಜಕೀಯ ತಲೆ ಹಾಕಬಾರದು. ರಾಜ್ಯದ ಏಳ್ಗೆ ಮುಖ್ಯವಾಗಬೇಕು. ಇದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದು ಯಾವಾಗ?
ರಾಜ್ಯದ ಸ್ಥಿತಿ?
ಶಾಸ್ತ್ರೀಯ ಭಾಷೆಗಾಗಿ ದೆಹಲಿಗೆ ಹೋಗುವುದಾಗಿ ಘರ್ಜಿಸಿದ ಯಡಿಯೂರಪ್ಪನವರ ತವರು ರಾಜ್ಯದಲ್ಲಿ ಕನ್ನಡ ಏನಾಗಿದೆ. ಆಡಳಿತ ಭಾಷೆ ಕನ್ನಡ ಎಂಬ ವಿಷಯ ಕುರಿತು ಈವರೆಗೆ 300 ಸುತ್ತೋಲೆಗಳು ಬಂದಿವೆ. ಆದರೆ ಇನ್ನೂ ಕೂಡ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಿಲ್ಲ. ಪ್ರಮುಖ ಸರ್ಕಾರಿ ಆದೇಶಗಳು, ರಾಜ್ಯ ಗೆಜೆಟ್‌, ಹಿರಿಯ ಅಧಿಕಾರಿಗಳ ವ್ಯವಹಾರ ಎಲ್ಲವೂ ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಇದಕ್ಕೆ ಕಾರಣಗಳನ್ನು ಸಾವಿರ ಹೇಳಬಹುದು. ಆದರೆ ಕನ್ನಡ ಜಾರಿಯಾಗದೇ ಇರುವುದು ಸತ್ಯ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬ ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿಯಾಗದೇ ಧೂಳು ಹಿಡಿಯುತ್ತಿದೆ. ಕೇಂದ್ರ ಸರ್ಕಾರ, ಖಾಸಗಿ ಉದ್ಯಮ ಸಂಸ್ಥೆಗಳ ವಿಷಯ ಹೋಗಲಿ. ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿಯಲ್ಲೂ ಕೂಡ ಕನ್ನಡಿಗರಿಗೆ ಮಾತ್ರ ಉದ್ಯೋಗವೆಂಬ ಷರತ್ತು ಇಲ್ಲ. ದೇಶದ ಯಾವುದೇ ಅಂಗೀಕೃತ ವಿ.ವಿ.ಯಿಂದ ಪದವಿ ಪಡೆದವರು ಉಪನ್ಯಾಸಕ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು. ಅಷ್ಟರಮಟ್ಟಿಗೆ ಕನ್ನಡಿಗರು ಉದಾರ ಹೃದಯಗಳಾಗಿದ್ದಾರೆ.
ಇನ್ನು ಕನ್ನಡ ಕಲಿಸುವ ಸರ್ಕಾರಿ ಶಾಲೆಗಳಲ್ಲಿ ಆಧುನಿಕತೆ ಎಂಬುದು ಹೇಳ ಹೆಸರಿಲ್ಲವಾಗಿದೆ. ನಮ್ಮ ಶಿಕ್ಷಣ ಪದ್ಧತಿ ಕೂಡ ಓಬಿರಾಯನ ಕಾಲದಲ್ಲಿಯೇ ಇದೆ. ಉದ್ಯೋಗ ಕಲ್ಪಿಸುವುದಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಜಾರಿಗೆ ತಂದಿಲ್ಲ. ಕನ್ನಡ ಮಾಧ್ಯಮದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದವರಿಗೆ ಮಾತ್ರ ಸರ್ಕಾರದ ವತಿಯಿಂದ ಸನ್ಮಾನಿಸಲಾಗುತ್ತಿದೆ ವಿನಃ ಕನ್ನಡಿಗರಿಗೆ ಮೀಸಲು ಪರಿಪಾಠವೇ ಇಲ್ಲ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಶಾಲೆಯಲ್ಲಿ ಕಲಿತವರಿಗೆ ಶೇ.15 ರಷ್ಟು ಗ್ರೇಸ್‌ ಮಾರ್ಕ್ಸ್‌ ನೀಡುವ ಆದೇಶ ಜಾರಿಗೊಳಿಸಿದ್ದರು. ಆದರೀಗ ಅದನ್ನು ತೆಗೆದು ಹಾಕಲಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಾಸ್ತ್ರೀಯ ಭಾಷೆಯೆಂಬುದು ಶಾಸ್ತ್ರೀಗಳ ಭಾಷೆಯಾಗಲಿದೆಯೇ ಹೊರತು ಕನ್ನಡದ ಮಣ್ಣಿನ ಮಕ್ಕಳಿಗೆ ಪ್ರಯೋಜನವಾಗುವ ಸಂಗತಿಯಲ್ಲ. ಹಾಗಿದ್ದೂ ಶಾಸ್ತ್ರೀಯ ಭಾಷೆ ಸ್ಥಾನಮಾನ ಬೇಡವೆಂದಲ್ಲ. ಅದರ ಜತೆಗೆ ಕನ್ನಡ ಕಲಿತರೆ ಸ್ವಾಭಿಮಾನದ ಬಾಳ್ವೆ ಸಾಧ್ಯವೆಂಬ ವಾತಾವರಣ ನಿರ್ಮಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಯಡಿಯೂರಪ್ಪನವರು ಆ ನಿಟ್ಟಿನಲ್ಲಿ ಯೋಚಿಸಿ, ಕಾರ್ಯಪ್ರವೃತ್ತವಾಗಬೇಕಿದೆ.