Sunday, May 3, 2009

ದುಡ್ಡೇ ದೊಡ್ಡಪ್ಪ :ಜನ ಸತ್ರಪ್ಪ

`ಎಲ್ಲರೂ ಸಮಾನರು, ಕೆಲವು ಹೆಚ್ಚು ಸಮಾನರು' ಎಂಬುದು ಚುನಾವಣೆ ವೇಳೆ ಎಲ್ಲರಿಗೂ ಅರ್ಥವಾಗುತ್ತಿದೆ. ಲೋಕಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಘೋಷಿಸುತ್ತಿರುವ ತಮ್ಮ ಆಸ್ತಿ ಮೌಲ್ಯದ ಪ್ರಮಾಣ ಗಮನಿಸಿದರೆ ಸಾಮಾನ್ಯರು ಬೆರಗಾಗುವಷ್ಟಿದೆ. ಚುನಾವಣೆಯಿಂದ ಚುನಾವಣೆಗೆ ಆಸ್ತಿ ಪ್ರಮಾಣ ಹಿಮಾಲಯದಂತೆ ನಿತ್ಯವೂ ಏರುತ್ತಿದೆ.
ಘೋಷಿತ ಆಸ್ತಿಯೆಲ್ಲವೂ ಕೇವಲ ಶೋಕೇಸ್‌. ರಾಜಕಾರಣಿಗಳ ಹೆಸರಿನಲ್ಲಿಲ್ಲದ ಆಸ್ತಿಗೆ ಲೆಕ್ಕವೇ ಇಲ್ಲ. ಸಂಸ್ಥೆ, ಮಕ್ಕಳು, ಮೊಮ್ಮಕ್ಕಳು, ಅಳಿಯ, ದೂರದ ಬಂಧು, ನಂಬಿಗಸ್ತ ಭಂಟರ ಹೆಸರಿನಲ್ಲಿ ಮಾಡಿರುವ ಆಸ್ತಿ ಲೆಕ್ಕಕ್ಕೆ ನಿಲುಕುವುದಿಲ್ಲ. ಅಷ್ಟರಮಟ್ಟಿಗೆ ಆಸ್ತಿ ಕ್ರೋಢೀಕರಣ ರಾಜಕಾರಣಿಗಳಿಂದ ನಡೆಯುತ್ತಿದೆ. ತಮ್ಮ ಮುಂದಿನ 10 ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯನ್ನು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವಿದೆ.
ಸರ್ಕಾರಿ ಗುತ್ತಿಗೆ ಮಾಡಲು ಬೇರೆಯವರಿಂದ ಸಾಲ ಪಡೆದವರು, ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡವರು, ರಾಜಕೀಯ ಪಕ್ಷಗಳಲ್ಲಿ ಬಾವುಟ ಕಟ್ಟಲು ಸೇರಿಕೊಂಡವರು ಇಂದು ಏನೇನೋ ಆಗಿ ಹೋಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿ, ಸಚಿವ, ಶಾಸಕ, ಸಂಸದ ಹೀಗೆ ಯಾವುದಾದರೊಂದು ಪ್ರಾತಿನಿಧ್ಯವನ್ನು ಒಂದು ಅವಧಿ ಅನುಭವಿಸಿದವರು ಕರೋಡಪತಿ ಆಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು?
ಅವರಿಗೆ ಬರುವ ಸಂಬಳದಲ್ಲಿ ಪೈಸೆ ಪೈಸೆ ಉಳಿಸಿದರೂ ಐದು ವರ್ಷದ ಅವಧಿ ಮುಗಿಯುವಷ್ಟರಲ್ಲಿ ಅಮ್ಮಮ್ಮಾ ಅಂದರೂ 10 ಲಕ್ಷ ಉಳಿತಾಯ ಮಾಡಬಹುದು. ಆದರೆ ಶಾಸಕ/ ಸಂಸದರಾದವರ ಆಸ್ತಿ ಅವರೇ ಘೋಷಿಸಿದಂತೆ ಕೋಟಿಗೆ ಮೀರಿರುತ್ತದೆ. ತೋಟ, ಐಷಾರಾಮಿ ಕಾರು, ಭರ್ಜರಿ ಬಂಗಲೆ ಎಲ್ಲವೂ ಅವರ ಬಳಿ ಸಂಗ್ರಹಿತಗೊಂಡಿರುತ್ತದೆ. ಆದರೆ ಲೆಕ್ಕಕ್ಕೆ ಸಿಗದ ಆಸ್ತಿ ಮೌಲ್ಯ ಅದೆಷ್ಟು ಕೋಟಿಗಳೋ ಬಲ್ಲವರಾರು?
ಅತೀ ಶ್ರೀಮಂತರು:
ಚುನಾವಣೆಗೆ ಸಲ್ಲಿಸಲಾದ ನಾಮಪತ್ರ ಜತೆ ಸಲ್ಲಿಸಿ ಆಸ್ತಿ ವಿವರ ನೋಡಿದರೆ ರಾಜಕಾರಣಿಗಳ ಶ್ರೀಮಂತಿಕೆ ಗೊತ್ತಾಗುತ್ತದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ರಾಜಗೋಪಾಲ್‌ ಆಸ್ತಿ ಮೌಲ್ಯ 299 ಕೋಟಿ ರೂ. ಎರಡನೇ ಸ್ಥಾನದಲ್ಲಿ ದೆಹಲಿ ದಕ್ಷಿಣದಿಂದ ಸ್ಪರ್ಧಿಸಿರುವ ಬಿ ಎಸ್ಪಿ ಅಭ್ಯರ್ಥಿ ಕರಣಸಿಂಗ್‌ ಇದ್ದು ಇವರ ಆಸ್ತಿ 150 ಕೋಟಿ ರೂ. ವಾಯುವ್ಯ ಮುಂಬೈನ ಎಸ್‌ಪಿ ಅಭ್ಯರ್ಥಿ 124 ಕೋಟಿ ಒಡೆಯರಾಗಿದ್ದರೆ, ತಿರುಪತಿಯಲ್ಲಿ ಕಣಕ್ಕೆ ಇಳಿದಿರುವ ಚಿರಂಜೀವಿ 88 ಕೋಟಿ ಆಸ್ತಿ ಮಾಲೀಕರಾಗಿದ್ದಾರೆ.
ಆಂಧ್ರದ ಹಾಲಿ ಸಿ ಎಂ ರಾಜಶೇಖರ ರೆಡ್ಡಿ 77 ಕೋಟಿ ಆಸ್ತಿ ಹೊಂದಿದ್ದರೆ, ಮಾಜಿ ಸಿ ಎಂ ಚಂದ್ರಬಾಬು ನಾಯ್ಡು 69 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇದು ಇಡೀ ದೇಶದ ಶ್ರೀಮಂತ ಅಭ್ಯರ್ಥಿಗಳ ಯಾದಿ.
ಕರ್ನಾಟಕ ಮಟ್ಟದಲ್ಲಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದ ಜೆಡಿ ಎಸ್‌ ಅಭ್ಯರ್ಥಿ ಸುರೇಂದ್ರಬಾಬು. ಇವರದ್ದು ಪಿತ್ರಾರ್ಜಿತ ಆಸ್ತಿಯಾಗಿದ್ದು 239 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಬೆಂಗಳೂರು ದಕ್ಷಿಣದ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್‌ ಗೋಪಿನಾಥ್‌ 69 ಕೋಟಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 44 ಕೋಟಿ, ಮಾಜಿ ಸಚಿವ ದಾವಣಗೆರೆ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ 34 ಕೋಟಿ ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ. ಸುರೇಂದ್ರಬಾಬು, ಕ್ಯಾಪ್ಟನ್‌ ಗೋಪಿನಾಥ್‌ ರಾಜಕಾರಣಕ್ಕೆ ಹೊಸಬರು. ಒಬ್ಬರು ರಿಯಲ್‌ ಎಸ್ಟೇಟ್‌ ಮತ್ತೊಬ್ಬರು ವಿಮಾನಯಾನದಿಂದ ಸಂಪಾದಿಸಿದ ಹಣವನ್ನು ತೋರಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ 6 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ಕೈಸೋತ ಜನ:
3-4 ಲಕ್ಷ ಜನಸಂಖ್ಯೆಯ ಪ್ರತಿನಿಧಿಯಾಗಿ ಶಾಸನಸಭೆಗೆ ಆಯ್ಕೆಯಾಗುವ ಶಾಸಕ, 10-19 ಲಕ್ಷ ಮತದಾರರ ಪ್ರತಿನಿಧಿಯಾಗಿ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಆಸ್ತಿ ಗಳಿಕೆ ಕೋಟಿ ಕೋಟಿಗಳಿದ್ದರೆ `ಮತದಾರ ಪ್ರಭು' ನಿಜಕ್ಕೂ ಕುಚೇಲನಾಗಿದ್ದಾನೆ. ಆತನ ಬಳಿ ಅವಲಕ್ಕಿಯಾಗಲಿ, ಗಂಟಲೊಣಗಿಸಿ, ಹಸಿವು ಇಂಗಿಸುವ ಗಂಜಿಯಾಗಲಿ ಇಲ್ಲ. ಅಷ್ಟು ಬರ್ಬಾದ್‌ ಎದ್ದು ಹೋಗಿದ್ದಾನೆ ಮತದಾರ.
ದೇಶದ ಶೇ.62 ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಭವಿಷ್ಯದ ಯಾವ ಕನಸುಗಳೂ ಇಲ್ಲ. ಕೃಷಿಯಲ್ಲಿ ತೊಡಗಿರುವ ಶೇ.40 ರಷ್ಟು ರೈತರು ಕೃಷಿಯಿಂದ ದೂರ ಹೋಗಲು ಹವಣಿಸುತ್ತಿದ್ದಾರೆ. ಶೇ.49 ರಷ್ಟು ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉದ್ಯೋಗ ಬಿಟ್ಟು ಹೊಟ್ಟೆ ಪಾಡಿಗೆ ಪೇಟೆಯತ್ತ ಮುಖಮಾಡಿದ್ದಾರೆ.
ಇನ್ನೂ ಕೂಡ ದೇಶದ ಶೇ.56 ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಪ್ರಮಾಣ ಶೇ.8 ರಷ್ಟು ಹೆಚ್ಚಳವಾಗಿದೆ. ಶೇ.63 ಗರ್ಭಿಣಿಯರು ರಕ್ತಿಹೀನತೆಗೆ ತುತ್ತಾಗಿದ್ದು ಭವಿಷ್ಯದ ಪ್ರಜೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ.82.7 ರಷ್ಟಿದ್ದು ದಂಗು ಬಡಿಸುವ ರೀತಿಯಲ್ಲಿದೆ. 1998ರಲ್ಲಿ 70 ರಷ್ಟಿದ್ದ ಈ ಪ್ರಮಾಣ 2006 ರಲ್ಲಿ 82 ಕ್ಕೇರಿದೆ.
15-49ವರ್ಷ ವಯೋಮಿತಿಯ ಶೇ.60 ರಷ್ಟು ಮಹಿಳೆಯರು ಆರನೇ ತರಗತಿಯವರೆಗೆ ಹಾಗೂ ಹೀಗೂ ಓದಿದ್ದಾರೆ. ಇವರ ಪೈಕಿ ಶೇ.28 ರಷ್ಟು ಮಹಿಳೆಯರು ಮಾತ್ರ 10 ತರಗತಿಯವರೆಗೆ ಓದಿದ್ದಾರೆ. ಶೇ.34 ರಷ್ಟು ಮಹಿಳೆಯರು ಶಾಲೆ ಮೆಟ್ಟಿಲು ಹತ್ತಿಲ್ಲ. ಇವೆಲ್ಲವೂ ಸ್ವಾತಂತ್ರ್ಯ 60 ವರ್ಷಗಳಲ್ಲಾಗಿರುವ ಸಾಧನೆ.
1995 ರಿಂದ 2007ರ ಅವಧಿಯಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,66,304. 1991ರಲ್ಲಿ ಶೇ.26 ರಷ್ಟು ರೈತರು ಸಾಲಗಾರರಾಗಿದ್ದರೆ, 2003ರಲ್ಲಿ ಈ ಪ್ರಮಾಣ ಶೇ.48.6 ರಷ್ಟಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮಿಕ್ಷೆ ವಿವರಿಸಿದೆ. 2006-07ರಲ್ಲಿ ದೇಶದ 200 ಜಿಲ್ಲೆಗಳಲ್ಲಿ 2.11 ಕೋಟಿ ಕುಟುಂಬದವರು ತಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಒದಗಿಸಿದೆ ಎಂದು ಕೋರಿದ್ದಾರೆ.
ಇಡೀ ದೇಶದ ಶೇ.47 ರಷ್ಟು ಜನರು ದಿನಕ್ಕೆ ಕನಿಷ್ಠ 20 ರೂ. ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನನಿರ್ವಹಣಾ ವೆಚ್ಚ ದುಪ್ಪಟ್ಟಾಗಿದ್ದರೂ ಆದಾಯ ಮಧ್ಯಮ ವರ್ಗದವರ ಆದಾಯದ ಮಟ್ಟ ಏರಿಕೆಯಾಗಿಲ್ಲ.
ಯುಪಿ ಎ ಸರ್ಕಾರದ ಅವಧಿಯಲ್ಲಿ 400 ವಿಶೇಷ ಆರ್ಥಿಕ ವಲಯ ಮಂಜೂರು ಮಾಡಲಾಗಿದೆ. ತಮ್ಮ ಗಂಜಿಗೆ ಅಕ್ಕಿ, ಮುದ್ದೆಗೆ ರಾಗಿ, ರೊಟ್ಟಿಗೆ ಗೋಧಿ,ಜೋಳ ಬೆಳೆಯುತ್ತಿದ್ದ ಭೂಮಿಯನ್ನು ಕಳೆದುಕೊಂಡ ರೈತರು ನಗರದತ್ತ ಗುಳೆ ಹೊರಟಿದ್ದಾರೆ. ಸ್ವಾಭಿಮಾನಿ ಬದುಕು ನಡೆಸುತ್ತಿದ್ದ ರೈತರು, ಕುಶಲಕರ್ಮಿಗಳು ಹಳ್ಳಿ ತೊರೆದು ನಗರ ಪ್ರದೇಶಗಳಲ್ಲಿ ಕಟ್ಟಡನಿರ್ಮಾಣ, ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳಲ್ಲಿ ಅನಿವಾಯವಾಗಿ ತೊಡಗಿಕೊಂಡಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗಿವೆ.
ಯಾರ ಅಭಿವೃದ್ಧಿ:
ದೇಶದ ಕೃಷಿ ಬೆಳವಣಿಗೆ ದರ ಶೇ.4 ರಷ್ಟು ಆಗಬೇಕೆಂಬ ಗುರಿಯಿದ್ದರೂ ಆಗಿರುವು ಶೇ.1.85 ಮಾತ್ರ. ಆರ್ಥಿಕ ಬೆಳವಣಿಗೆ ದರ 9 ಆಗಬೇಕೆಂದಿದ್ದರೂ ಶೇ.7 ರ ಗಟಿ ದಾಟಿಲ್ಲ. ಮುಂದಿನ ದಿನಗಳಲ್ಲಿ ಅದು 5.6 ಕ್ಕೆ ಇಳಿಯಲಿದೆ.
ಸ್ವಾತಂತ್ರ್ಯ ಇಷ್ಟು ವರ್ಷಗಳಲ್ಲಿ ಯಾರ ಅಭಿವೃದ್ಧಿಯಾಗಿದೆ. ಶೇ.15 ರಷ್ಟು ಮಂದಿ ಮಾತ್ರ ಅಭಿವೃದ್ಧಿಯ ಫಲವುಂಡಿದ್ದು ಉಳಿದೆಲ್ಲಾ ಮಂದಿ ದೈನೇಸಿ ಸ್ಥಿತಿಯಲ್ಲಿದ್ದಾರೆ. ಪಿತ್ರಾರ್ಜಿತ ಆಸ್ತಿ ಹೊಂದಿದವರು ರಿಯಲ್‌ ಎಸ್ಟೇಟ್‌ನಿಂದಾಗಿ ದಿಢೀರ್‌ ಶ್ರೀಮಂತರಾಗಿದ್ದಾರೆ. ಬಂಡವಾಳಶಾಹಿಗಳು ಹಣ ಹೂಡಿ ಲಾಭ ಗಳಿಸಿದ್ದಾರೆ. ಆದರೆ ನಮ್ಮಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಹಣ ಹೂಡಿ, ಗೆದ್ದ ಮೇಲೆ ಭ್ರಷ್ಟಾಚಾರದಿಂದ ಹಣ ಗಳಿಸುವ ಹೊಸ ಬಂಡವಾಳ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮತದಾರ ಶಪಿಸುತ್ತಾ ಮತ ಹಾಕುತ್ತಿದ್ದಾನೆ. ಮತ ಪಡೆದು ಆಯ್ಕೆಯಾದವರು ನಿತ್ಯವೂ ತಮ್ಮ ಬೊಕ್ಕಸ ತುಂಬಿಸಿ ಕೊಳ್ಳುತ್ತಾ, ಆಸ್ತಿಯ ಅಗಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಶಾಸಕರು, ಸಂಸದರೇ ಜನರ ನಿಜವಾದ ಪ್ರತಿನಿಧಿಗಳು. ಅವರು ಶ್ರೀಮಂತರಾದರೆ ಜನರೂ ಶ್ರೀಮಂತರಾದಾರು ಎಂದು ಭಾವಿಸಿದರೆ ತಪ್ಪಾಗಲಿಕ್ಕಿಲ್ಲವಲ್ಲವೇ?

1 comment:

ರಮೇಶ್ ಹಿರೇಜಂಬೂರು said...

ಲೇಖನ ತುಂಬಾ ಚೆನ್ನಾಗಿದೆ, ಇದು ನೂರಕ್ಕೆ ನೂರರಷ್ಟು ಸತ್ಯವಾದುದು...